ಸಾರಾಂಶ
ಮುಂಡರಗಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲ ಕಾನೂನುಗಳಿಗೂ ನಮ್ಮ ಭಾರತದ ಸಂವಿಧಾನ ತಾಯಿ ಇದ್ದಂತೆ. ಭಾರತದ ಸಂವಿಧಾನ ಎಂದರೆ ಈ ದೇಶದ ಮೂಲಭೂತ ಕಾನೂನು ಎಂದು ಮುಂಡರಗಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಜ್ಯೋತಿ ಕಾಗಿನಕರ್ ಹೇಳಿದರು.ಅವರು ಭಾನುವಾರ ಸಂಜೆ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಡರಗಿ, ಐಕ್ಯೂಎಸಿ ಹಾಗೂ ಎನ್.ಎಸ್.ಎಸ್. ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಜರುಗಿದ ವಿಶ್ವ ವಿದ್ಯಾಲಯದ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಸಂವಿಧಾನದ ಮೂಲ ಆಶಯಗಳು ಹಾಗೂ ಅವುಗಳ ಅನುಷ್ಠಾನದ ಕುರಿತು ಮಾತನಾಡಿದರು. ವಿಶ್ವದಲ್ಲಿ ಅತಿದೊಡ್ಡದಾದ ಕಾನೂನು ಏನಾದರೂ ಇದ್ದರೆ ಅದು ನಮ್ಮ ಭಾರತದ ಸಂವಿಧಾನ ಮಾತ್ರ. ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದರ ಜತೆಗೆ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆಯೂ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ದೇಶವನ್ನು, ರಾಷ್ಟ್ರವನ್ನು, ರಾಷ್ಟ್ರಗೀತೆಯನ್ನು ಗೌರವಿಸುವುದು, ಹೆತ್ತ ತಂದೆ ತಾಯಿಯನ್ನು ಗೌರವಿಸುವುದು ನಮ್ಮ ಮೂಲಭೂತ ಹಕ್ಕಾಗಿದೆ.
ಇದೇ ಜುಲೈ12ರಂದು ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಜರುಗಲಿದ್ದು, ನ್ಯಾಯಾಲಯದಲ್ಲಿ ಬುಹು ವರ್ಷಗಳಿಂದ ಜರುಗುತ್ತಿರುವ ಕೇಸುಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ವರ್ಷದಲ್ಲಿ 3-4 ಬಾರಿ ಲೋಕ್ ಅದಾಲತ್ ಮಾಡುವ ಮೂಲಕ ಅನೇಕ ಹಳೆಯ ಕೇಸುಗಳನ್ನು ಮುಕ್ತಾಯಗೊಳಿಸಲಾಗುತ್ತಿದೆ. ಹೀಗಾಗಿ ಬಹುವರ್ಷಗಳಿಂದ ಜರುಗುತ್ತಿರುವಕೇಸುಗಳಿದ್ದರೆ ಅಂತವರು ಮೊದಲೇ ನ್ಯಾಯಾಲಯಕ್ಕೆ ಬಂದು ಮಾಹಿತಿ ನೀಡಿದರೆ ಆ ದಿನ ಪರಿಹರಿಸಲು ಅನುಕೂಲವಾಗುತ್ತದೆ ಎಂದರು. ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ಮಂಜುನಾಥ ಅರಳಿ ಮಾತನಾಡಿ, ಎಲ್ಲ ಕಾನೂನುಗಳಿಗೂ ಮೂಲ ಬೇರು ಸಂವಿಧಾನ. ಪ್ರತಿಯೊಬ್ಬರೂ ನಮ್ಮ ನಿತ್ಯದ ಜೀವನಕ್ಕೆ ಬೇಕಾದ ಕಾನೂನನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಕಾನೂನಿನ ಬಗ್ಗೆ ತಿಳಿಯದೇ ಇದ್ದಲ್ಲಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲರೂ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಿ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮೀತಿ ಸದಸ್ಯರಾದ ಅರುಣಾ ಪಾಟೀಲ, ಪತ್ರಕರ್ತ ಶರಣು ಸೊಲಗಿ, ಪ್ರಭಾವತಿ ಬೆಳವಣಕಿಮಠ, ಪ್ರಾ.ಉಮಾ ಕೊಳ್ಳಿ, ಕಾವೇರಿ ಬೋಲಾ, ತಿಮ್ಮಾನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕವಿತಾ ಸ್ವಾಗತಿಸಿ, ಉದ್ದಮ್ಮ ನಿರೂಪಿಸಿ, ಸ್ವಪ್ನಾ ವಂದಿಸಿದರು.