ಕೊಪ್ಪಳ: ಪೌರ ಕಾರ್ಮಿಕರಿಗೆ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಭಾಗ್ಯನಗರದ ಪಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ಚರ್ಚೆ ಮಾಡಿ ಅಂತಿಮವಾಗಿ ಪಪಂಯಿಂದಲೇ ಪೌರಕಾರ್ಮಿಕರಿಗೆ ವಸತಿ ಸಮುಚ್ಛಯ ನಿರ್ಮಾಣ ಮಾಡಿ ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಇರುವ 1.06 ಎಕರೆ ಭೂಮಿಯಲ್ಲಿ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.

ಹಿರಿಯ ಪತ್ರಕರ್ತ ದಿ.ವಿಠ್ಠಪ್ಪ ಗೋರಂಟ್ಲಿ ಅವರ ಹೆಸರನ್ನು ಪಟ್ಟಣದ ಗಾಂಧೀಜಿ ವೃತ್ತದಿಂದ ಅವರ ಮನೆಗೆ ತೆರಳುವ ಬಜಾರ್ ರಸ್ತೆಗೆ ನಾಮಕರಣ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ಮಾಡಿ ಎಲ್ಲರ ಒಪ್ಪಿಗೆ ಮೇಲೆ ನಿರ್ಧರಿಸಲಾಯಿತು. ಭಾಗ್ಯನಗರದಲ್ಲಿಯೇ ಇದ್ದುಕೊಂಡು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಹೋರಾಟ ಮಾಡಿದ್ದಾರೆ. ಪತ್ರಕರ್ತರಾಗಿಯೂ ರಾಜ್ಯಮಟ್ಟದಲ್ಲಿ ಸೇವೆ ಮಾಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಯಾವುದಾದರೂ ರಸ್ತೆಗೆ ನಾಮಕರಣ ಮಾಡುವುದು ಸೂಕ್ತ ಎಂದು ಚರ್ಚಿಸಿ ಕೊನೆಗೆ ಅವರ ಮನೆಗೆ ಹೋಗುವ ಬಜಾರ್ ರಸ್ತೆಗೆ ಇಡಲು ಎಲ್ಲರೂ ಒಪ್ಪಿಗೆ ಸೂಚಿಸಿದರು.

ಕೆಕೆಆರ್ ಡಿಬಿಯಿಂದ ನಾಲ್ಕು ಕೋಟಿ ಅನುದಾನ ಬಂದಿದ್ದು, ಭಾಗ್ಯನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು. ಈ ಹಿಂದೆ ಈ ಅನುದಾನ ಲೋಕೋಪಯೋಗಿ ಇಲಾಖೆಗೆ ನೀಡಲಾಗಿತ್ತು. ಆದರೆ ಈಗ ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ನಾಲ್ಕು ಕೋಟಿ ಅನುದಾನವನ್ನು ಭಾಗ್ಯನಗರ ಪಪಂ ಮೂಲಕವೇ ಪ್ರಸ್ತಾವನೆ ಸಿದ್ಧ ಮಾಡಿ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಲು ತೀರ್ಮಾನ ಮಾಡಲಾಯಿತು. ಪ್ರತಿ ವಾರ್ಡ್‌ಗೆ ₹20 ಲಕ್ಷ ರಸ್ತೆ, ಚರಂಡಿ ಸೇರಿದಂತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಲು ಸಭೆ ಅಂಗೀಕರಿಸಿತು.

9 ಲಕ್ಷ ಉಳಿತಾಯ: ಭಾಗ್ಯನಗರ ಪಟ್ಟಣ ಪಂಚಾಯಿತಿಯ 2026-27 ನೇ ಸಾಲಿನಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಬಜೆಟ್ ನ್ನು ₹9ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು. 2026-27 ನೇ ಸಾಲಿನಲ್ಲಿ ₹7.40 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದ್ದು, ಈ ಪೈಕಿ ₹7.31 ಕೋಟಿ ಅಂದಾಜು ವೆಚ್ಚವನ್ನು ಲೆಕ್ಕಾಚಾರ ಮಾಡಿ ₹ 9 ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.