ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬೆಳಗೋಳ ಗ್ರಾಮದ ಬಳಿಯ ಸರ್ವೇ ನಂಬರ್ 101ರಲ್ಲಿ ಗುರುಕಲ ಎಂಬ ಖಾಸಗಿ ಶಾಲೆಗೆ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.ಪಂಚಾಯ್ತಿಯಿಂದ ಯಾವುದೇ ಅನುಮತಿ ಪಡೆಯದೆ ಕಾನೂನು ಬಾಹಿರವಾಗಿ ನಾಲೆಗೆ ಸೇರಿದ ಜಾಗ ಹಾಗೂ ಬಫರ್ ಝೋನ್ ಸ್ಥಳದಲ್ಲಿ ಅಕ್ರಮವಾಗಿ ಗುರುಕುಲ ಶಾಲೆಯು ಈಗಾಗಲೇ ಶಾಲಾ ಕಟ್ಟಡವನ್ನು ನಿರ್ಮಿಸಿದೆ. ಈಗ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕಿದ್ದ ಸರ್ಕಾರಿ ಜಾಗಕ್ಕೂ ಖನ್ನ ಹಾಕಿ ಜೊತೆಗೆ ಬಫರ್ ಝೋನ್ ನಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡು 6 ಎಕರೆ 12 ಗುಂಟೆ ಸರ್ಕಾರಿ ಜಾಗವನ್ನು ಗುಳುಂ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಈ ಅಕ್ರಮದಲ್ಲಿ ಅಧಿಕಾರಿಗಳ ಕೈ ಚಳಕವಿದ್ದು, ಖಾತೆ ಮಾಡಿಸಿಕೊಂಡು ಆ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ. ಅಲ್ಲದೇ, ಈ ಸ್ಥಳದಲ್ಲಿ ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 1.22 ಕೋಟಿ ರು. ಹಣವನ್ನು ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದು, ಸರ್ಕಾರಿ ಜಾಗದಿಂದಲೇ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ದೂರಿದರು.ಬಳಿಕ ಬೆಳಗೋಳ ಗ್ರಾಮದ ನಾಡ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಅಕ್ಕ- ಪಕ್ಕದವರ ಸಮಕ್ಷಮವಿಲ್ಲದೆ ಅವರಿಗೆ ಹೇಗೆ ಅಳತೆ ಮಾಡಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅಕ್ರಮವಾಗಿ ಕಾಂಪೌಂಡ್ ಹಾಗೂ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ನೀವೇಕೆ ಮೌನವಹಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ನಂತರ ತಹಸೀಲ್ದಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಗ್ರಾಮಸ್ಥರು, ಎರಡು, ಮೂರು ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಮಾಜಿ ಸದಸ್ಯ ಪೈ.ಪ್ರಕಾಶ್, ಹೋರಾಟಗಾರ ಕುಮಾರ್ ಬಿ.ಆರ್, ಗ್ರಾಮಸ್ಥರಾದ ನವೀನ್, ರಮೇಶ್, ದೀಪಕ್, ಕಿಶೋರ್, ಜಯಂತ್, ಶಶಾಂಕ್, ಪಾಪಯ್ಯ, ವಿಶ್ವನಾಥ್, ಸುನೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.