ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ರೋಗಿಗಳಿಗೆ ಅನುಕೂಲ

| Published : Jul 23 2025, 02:07 AM IST

ಸಾರಾಂಶ

ಪಟ್ಟಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದ್ದು ಇದಕ್ಕಾಗಿ ದುಬಾರಿ ವೆಚ್ಚದಲ್ಲಿ ಖಾಸಗಿ ಲ್ಯಾಬ್‌ಗಳಿಗೆ ಹಣ ನೀಡುವ ಪರಿಸ್ಥಿತಿ ತಪ್ಪಲಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ಬಡ ರೋಗಿಗಳಿಗೆ ಅನುಕೂಲವಾಗಲಿದ್ದು ಇದಕ್ಕಾಗಿ ದುಬಾರಿ ವೆಚ್ಚದಲ್ಲಿ ಖಾಸಗಿ ಲ್ಯಾಬ್‌ಗಳಿಗೆ ಹಣ ನೀಡುವ ಪರಿಸ್ಥಿತಿ ತಪ್ಪಲಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ತಾಲೂಕು ಆಸ್ಪತ್ರೆಯ ನೂತನ ಲ್ಯಾಬ್‌ನ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ನಿಯಮದಂತೆ ಮೆಡಿಕಲ್ ಕಾಲೇಜು ಇರುವೆಡೆ ಎರಡು ಆಸ್ಪತ್ರೆಗಳು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಎಡಬೆಟ್ಟದಲ್ಲಿ ಆಸ್ಪತ್ರೆ ಕಟ್ಟಡವಿದೆ. ನಮ್ಮ ಜಿಲ್ಲೆಯ ಕೊಳ್ಳೇಗಾಲದಲ್ಲಿ ೨೫೦ ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರಕಿದ್ದು ಈಗಾಗಲೇ ಕೊಳ್ಳೇಗಾಲದಲ್ಲಿ ೫ ಎಕರೆ ಭೂಮಿಯನ್ನು ಇದಕ್ಕೆ ಮೀಸಲಿಟ್ಟಿದೆ. ಇದು ಗುಲ್ಬರ್ಗ ಬಿಟ್ಟರೆ ಚಾಮರಾಜನಗರ ಜಿಲ್ಲೆಯಲ್ಲಿ ಈ ಯೋಜನೆಯಡಿ ನಿರ್ಮಾಣವಾಗುತ್ತಿರುವ ೨ ನೇ ಆಸ್ಪತ್ರೆಯಾಗಲಿದೆ.

ಪಟ್ಟಣದಲ್ಲಿ ೩೫ ಕೋಟಿ ರು. ವೆಚ್ಚದಲ್ಲಿ ೧೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗಿದ್ದು ಕೊಳ್ಳೇಗಾಲಕ್ಕೂ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಕರೆಯಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಈಗ ನೂತನ ಲ್ಯಾಬ್ ನಿರ್ಮಾಣವಾಗಲಿದ್ದು ಇದರಲ್ಲಿ ಸಂಕ್ರಾಮಿಕ ರೋಗಳನ್ನು ಪತ್ತೆ ಮಾಡುವ ರಕ್ತ, ಕಫ, ಮಲ, ಮೂತ್ರ ಸೇರಿದಂತೆ ಇತರೆ ಪರೀಕ್ಷೆಗಳು ನಡೆಯಲಿದೆ. ಹೃದಯಸಂಬಂಧಿ ಕಾಯಿಲೆಗಳನ್ನು ಪತ್ತೆ ಮಾಡುವ ರಕ್ತ ಪರೀಕ್ಷೆಗಳು, ಬ್ಲಡ್ ಕಲ್ಚರ್, ಡೆಂಘೀ, ಸೇರಿದಂತೆ ಇತರೆ ಜ್ವರ ಪರೀಕ್ಷೆಗಳ ರಕ್ತ ಪರೀಕ್ಷೆಗಳು ಇರಲಿದ್ದು ಇಲ್ಲಿಗೆ ಒಬ್ಬ ಪ್ಯಾಥಲಜಿಸ್ಟ್ ಹಾಗೂ ಅಗತ್ಯವಿದ್ದಲ್ಲಿ ಮೈಕ್ರೋಬಯಾಲಜಿಸ್ಟ್‌ಗಳು ಇರಲಿದ್ದು ತ್ವರಿತವಾಗಿ ರೋಗ ಪತ್ತೆ ಮಾಡಲು ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಸಹಕಾರವಾಗಲಿದೆ. ಇದರೊಂದಿಗೆ ಬಡರೋಗಿಗಳ ಜೇಬಿಗೂ ಇದು ಹೊರೆಯಾಗುವುದಿಲ್ಲ, ೪೧ ಲಕ್ಷ ರು. ವೆಚ್ಚದಲ್ಲಿ ಈ ಲ್ಯಾಬ್ ತಲೆಎತ್ತಲಿದೆ. ಗುಣಮಟ್ಟದ ಕಾಮಗಾರಿಯನ್ನು ಸಂಬಂಧಪಟ್ಟ ಅಭಿಯಂತರರು ಹಾಗೂ ಗುತ್ತಿಗೆದಾರರು ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕರಿಗೆ ೫೦ ಕೋಟಿ ರು. ಸಂತಸ: ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಕೇವಲ ವಿರೋಧ ಪಕ್ಷಗಳ ಸುಳ್ಳು ಆಪಾದನೆಯಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೇ ೫೫೦ ಕೋಟಿ ರು.ಗಳ ಅನುದಾನದಲ್ಲಿ ಕೆಲಸಗಳು ನಡೆಯುತ್ತಿದೆ. ಈಗ ೫೦ ಕೋಟಿ ರು.ಗಳ ವಿಶೇಷ ಅನುದಾನವನ್ನು ನೀಡಲು ನಮ್ಮ ಸರ್ಕಾರ ಸಿದ್ಧತೆ ನಡೆಸಿದೆ. ಇದರಲ್ಲಿ ೩೭.೫ ಕೋಟಿ ರು. ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ನಗರಾಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಉಳಿದ ೧೨.೫ ಕೋಟಿ ರು.ಗಳನ್ನು ಶಾಸಕರ ವಿವೇಚನೆ ಬಿಡಲಾಗಿದ್ದು ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಇದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರಂ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀಧರ್ ಮಾತನಾಡಿದರು. ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ನಾಮನಿರ್ದೇಶಿತ ಸದಸ್ಯ ಲಿಂಗರಾಜುಮೂರ್ತಿ, ಮುನವ್ವರ್‌ಬೇಗ್ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೈ.ಜಿ. ಶಿಲ್ಪ, ರೂಪೇಶ್, ರೇವಣ್ಣ, ಜೆಇ ಕಲ್ಯಾಣಸ್ವಾಮಿ, ಗುತ್ತಿಗೆದಾರ ವಿಕಾಸ್, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ನಂಜುಂಡಶೆಟ್ಟಿ ಸೇರಿದಂತೆ ಅನೇಕರು ಇದ್ದರು.