ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಇತ್ತೀಚೆಗೆ ನಿರ್ಮಾಣವಾದ ಬಸವೇಶ್ವರ ಸೌಹಾರ್ದ ಸಹಕಾರಿ ಪತ್ತಿನ ಕಚೇರಿ ಕಟ್ಟಡದ ನಿರ್ಮಾಣ ವೇಳೆ ಎಪಿಎಂಸಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಬಗ್ಗೆ ದೂರು ಬಂಧ ಹಿನ್ನಲೆಯಲ್ಲಿ ಕೃಷಿ ಮಾರಾಟ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ಕೊಡೇಗೌಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ನಿಯಮ ಉಲ್ಲಂಘಿಸಿದ ಬಗ್ಗೆ ವಿಜಯಪುರದ ಗುರಲಿಂಗಪ್ಪ ಗುನ್ನಾಪೂರ ಎಂಬುವರು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

ಎಪಿಎಂಸಿಯಿಂದ ನೀಡಿದ ೭೫*೯೫ ಚದರಡಿ ಜಾಗೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬ್ಯಾಂಕ್ ಕಟ್ಟಡ ನಿರ್ಮಿಸಿದ್ದು, ಉಳಿದ ಜಾಗೆಯನ್ನು ಸ್ವಂತ ಆದಾಯಕ್ಕಾಗಿ ಎಪಿಎಂಸಿ ನಿಯಮವನ್ನು ಉಲ್ಲಂಘಿಸಿ ಮಳಿಗೆಗಳು ನಿರ್ಮಿಸಿದ್ದು ಕಂಡು ಬಂದಿದೆ. ಕೊಡೇಗೌಡ ಅವರು ಬ್ಯಾಂಕ್‌ ಒಳ ಆವರಣ ಹಾಗೂ ಹೊರ ಆವರಣ ತಪಾಸಣೆ ನಡೆಸಿದರಲ್ಲದೇ, ಮಳಿಗೆಗಳನ್ನು ನಿರ್ಮಿಸಿದ್ದನ್ನು ವೀಕ್ಷಿಸಿದರು.ಈ ವೇಳೆ ಬ್ಯಾಂಕ್‌ ಅಧ್ಯಕ್ಷ ಕಾಶಿನಾಥ ಮುರಾಳ ಸಮಜಾಯಿಸಿ ನೀಡಲು ಪ್ರಯತ್ನಿಸಿದರು. ಆದರೆ ಅಧಿಕಾರಿಗಳು ನಿಯಮಬಾಹಿರವಾಗಿ ಮಳಿಗೆಗಳನ್ನು ಕಟ್ಟಲಾಗಿದೆ ಎಂದು ತಯಾರಿಸುವುದಾಗಿ ದೂರುದಾರ ಗುನ್ನಾಪೂರ ಅವರಿಗೆ ತಿಳಿಸಿದರು. ಅಲ್ಲದೇ, ಸ್ಥಳೀಯ ಕೆಲವರು ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಕಾರ್ಯದರ್ಶಿ ಆರ್.ಎಸ್.ರಾಠೋಡ, ಬ್ಯಾಂಕ್‌ ನಿರ್ದೇಶಕರಾದ ಬಿ.ಎಸ್.ಪಾಟೀಲ(ಯಾಳಗಿ), ಎಂ.ಎಸ್.ಸರಶೆಟ್ಟಿ, ಸುಭಾಸ ಹೂಗಾರ ಉಪಸ್ಥಿತರಿದ್ದರು.---


ಕೋಟ್‌

ಎಪಿಎಂಸಿ ನಿಯಮದ ಪ್ರಕಾರ ಬ್ಯಾಂಕ್ ಕಟ್ಟಡಕ್ಕೆ ಮಾತ್ರ ಬಳಿಸಿಕೊಳ್ಳಬೇಕು. ಆದರೆ, ಬ್ಯಾಂಕ್ ಕಟ್ಟಡದ ಜೊತೆಗೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನಿಡಿರುವುದು ಕಂಡು ಬಂದಿದೆ. ಇಲಾಖೆಯ ಅಭಿಯಂತರ ಮೂಲಕ ಎಷ್ಟು ಜಾಗೆ ಕಬಳಿಕೆಯಾಗಿದೆ, ಎಷ್ಟು ಮಳಿಗೆಗಳು ಯಾವ ಸೈಜಿನಲ್ಲಿ ಅನಧಿಕೃತವಾಗಿ ಕಟ್ಟಲಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ತಯಾರಿಸಿ ದೂರುದಾರರ, ಕಾರ್ಯದರ್ಶಿಯವರ ವರದಿಯೊಂದಿಗೆ ನಿರ್ದೇಶಕರಿಗೆ ವರದಿ ನೀಡಲಾಗುವುದು. ಡಾ.ಕೊಡೇಗೌಡ, ಕೃ.ಮಾ ಹೆಚ್ಚುವರಿ ನಿರ್ದೇಶಕರು