ಸಾರಾಂಶ
ಕಟ್ಟಡ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಗೋವಿಂದಪ್ಪ ಭರವಸೆ
ಕನ್ನಡಪ್ರಭ ವಾರ್ತೆ ಹೊಸದುರ್ಗತಾಲೂಕಿನಾದ್ಯಂತ ವಿವಿಧೆಡೆ ಹಲವು ಕಾರಣಗಳಿಂದ ಅರ್ಧಕ್ಕೆ ನಿಂತಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸಲಾಗುವುದು. ಇನ್ನೂ ಹಲವು ಕಡೆ ಸಮುದಾಯ ಭವನ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಭರವಸೆ ನೀಡಿದರು.
ತಾಲೂಕು ಕುರುಬರ ಸಂಘದ ವತಿಯಿಂದ ಪಟ್ಟಣದ ಸಿದ್ದೇಶ್ವರ ದೇವಾಲಯ ಸಮೀಪದ ಕನಕ ಸಮುದಾಯ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ₹8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕನಕ ಸಮುದಾಯ ಭವನದ ಮುಂದುವರೆದ ಕಟ್ಟಡ ನಿರ್ಮಾಣದ ಪೂಜಾ ಕಾರ್ಯಕ್ರಮ ಹಾಗೂ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕುರುಬ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ ₹3 ಕೋಟಿ ಹಣ ನೀಡಿದ್ದೇನೆ. ಅದೇ ರೀತಿ ಇತರೆ ಸಮುದಾಯದ ಭವನಗಳ ನಿರ್ಮಾಣಕ್ಕೆ ₹13 ಕೋಟಿ ಹಣ ನೀಡಿದ್ದೇನೆ. ತಾಲೂಕಿನ ಎಲ್ಲಾ ಸಮುದಾಯಗಳಿಗೂ ಹಣ ನೀಡಿದ್ದೇನೆ. ಎಲ್ಲರ ಸಹಕಾರದಿಂದ ಶಾಸಕರಾಗಿದ್ದು, ಎಲ್ಲರನ್ನೂ ಸಮನಾಗಿ ಸ್ವೀಕರಿಸುವೆ ಎಂದರು.
ತಾಲೂಕಿನ ಕುರುಬ ಸಮುದಾಯಕ್ಕೆ 1962 ರಿಂದ 2024 ರವೆಗೂ ರಾಜಕೀಯ ಇತಿಹಾಸವಿದೆ. ಎಲ್ಲಾ ಸಮುದಾಯಗಳನ್ನು ಪ್ರೀತಿಸುವ ಗುಣ ಕುರುಬ ಸಮುದಾಯಕ್ಕಿದೆ. ಜಿ.ಟಿ. ರಂಗಪ್ಪ ಹಾಕಿದ ಬುನಾದಿ ಇಂದಿಗೂ ಇದೆ. ಎಲ್ಲಾ ಶಾಸಕರು ಸಮುದಾಯದ ಹೆಸರು ಉಳಿಸುವ ಕಾರ್ಯ ಮಾಡಿದ್ದಾರೆ ಎಂದು ಶಾಸಕ ಬಿ.ಜಿ ಗೋವಿಂದಪ್ಪ ಹೇಳಿದರು.ಸಮಾಜದ ಮುಖಂಡ ಕಾರೇಹಳ್ಳಿ ಹೆಚ್.ಟಿ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಗಿನೆಲೆ ಮಹಾಸಂಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಾಗೋದಿ ಮಂಜುನಾಥ್, ಕುರುಬ ಸಂಘದ ರಾಜ್ಯಾ ಉಪಾಧ್ಯಕ್ಷ ಎಂ.ಎಚ್. ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ನಾಗೇನಹಳ್ಳಿ ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಂಜಿನಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ. ಅನಂತ್, ಕನಕ ಸಾಂಸ್ಕೃತಿಕ ನೌಕರರ ಸಂಘದ ಗೌರವಾಧ್ಯಕ್ಷ ಶಾಂತಮೂರ್ತಿ ಇತರೆ ಸಮುದಾಯದವರಿದ್ದರು.