ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹೊರವಲಯದಲ್ಲಿರುವ ಕೆರೆಯಂಗಳದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು. ಇದಕ್ಕಾಗಿ ಒಂದು ಕೋಟಿ ರು. ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದರು.ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಹಿಳಾ ಗಂಗಮತ ಬೆಸ್ತರ್ ಸಂಘ, ಜಿಲ್ಲಾ ಗಂಗಮತ ಬೆಸ್ತರ್ ಸಂಘದ ವತಿಯಿಂದ ಆಯೋಜಿಸಿದ್ದ ಗಂಗಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ನಗರಸಭೆಯಿಂದ ಕೆರೆ ಅಂಗಳದಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ, ಇನ್ನೂ ಅಂಬಿಗರ ಚೌಡಯ್ಯ ಅವರ ಪ್ರತಿಮೆ ನಿರ್ಮಾಣಕ್ಕೂ ನಗರ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವುದಾಗಿ ಹೇಳಿದರು.ಕೊಣನಹಳ್ಳಿ, ಬೂದನೂರು ಕೆರೆ ಅಭಿವೃದ್ಧಿಗೆ ೫ ಕೋಟಿ ರು. ಅನುದಾನ ನೀಡಲಾಗಿದೆ. ಈ ಕೆರೆಗಳು ಅಭಿವೃದ್ಧಿಯಾದರೆ ಮೀನು ಸಾಕಣೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಇದರಿಂದ ಸಮುದಾಯದವರಿಗೂ ಅನುಕೂಲವಾಗಲಿದೆ ಎಂದು ನುಡಿದರು.
ಹಳೇ ಮೈಸೂರು ವ್ಯಾಪ್ತಿಗೆ ಎಂಎಲ್ಸಿ ಸ್ಥಾನ ಕೊಡಿ:
ರಾಜ್ಯ ಗಂತಾಮತ ನೌಕರರ ಸಂಘದ ಗೌರವಾಧ್ಯಕ್ಷ ಟಿ.ಕೃಷ್ಣಯ್ಯ, ಜಿಲ್ಲೆಯಲ್ಲಿ ಬೆಸ್ತ ಸಮುದಾಯದವರು ೨ ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ನಗರದಲ್ಲಿ ಅಂಬಿಗರ ಚೌಡಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಬೇಕು. ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲೂ ವಿಶೇಷ ಆದ್ಯತೆ ನೀಡಬೇಕು. ಸಮುದಾಯ ಭವನ, ವಿದ್ಯಾರ್ಥಿನಿಲಯ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಮಾಜದ ಯುವಕರಿಗೆ ಯಾವುದೇ ನಿಗಮ-ಮಂಡಳಿ ಸ್ಥಾನ ಸಿಕ್ತಿಲ್ಲ, ಗಂಗಮತಸ್ಥ ಸಮಾಜಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು, ಶಾಸಕರಾದ ರವಿಕುಮಾರ್ ಅವರು ಸಿಎಂ ಜೊತೆ ಮಾತನಾಡಿ, ಮೈಸೂರು ಭಾಗಕ್ಕೆ ವಿಧಾನಪರಿಷತ್ ಸ್ಥಾನ ದೊರಕಿಸಿಕೊಡುವಂತೆ ಮನವಿ ಮಾಡಿದರು.ಮಹಿಳಾ ಸಭಾಭವನ ನಿರ್ಮಿಸಲಿ:
ಜಿಲ್ಲಾ ಮಹಿಳಾ ಗಂಗಮತ ಬೆಸ್ತರ್ ಸಂಘದ ಅಧ್ಯಕ್ಷೆ ಸಿ.ಗಾಯಿತ್ರಿ ಕೃಷ್ಣಪ್ಪ, ನಮ್ಮ ಸಮುದಾಯದವರಿಗೆ ರಾಜಕೀಯ ಸ್ಥಾನಮಾನ ಸಿಗಬೇಕು, ಮೀನು ಮಾರಾಟಕ್ಕೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿಕೊಡಬೇಕು. ಸಮುದಾಯ ಭವನದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ಜೊತೆಗೆ ಮಹಿಳಾ ಸಭಾ ಭವನವನ್ನು ನಿರ್ಮಿಸಿಕೊಡಬೇಕು, ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.ವೇದಿಕೆಯಲ್ಲಿ ಹಾವೇರಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರದ ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿರುವ ಗಜೇಂದ್ರಮೋಕ್ಷ ಕೊಳದಿಂದ ಗಂಗಾಮತಸ್ಥ ಸಮುದಾಯದವರು ಮೆರವಣಿಗೆ ಹೊರಟು ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸಾಗಿಬಂದರು.ಸಮಾರಂಭದಲ್ಲಿ ಸಮಾಜ ಸೇವಕರಾದ ವರದರಾಜು, ಜಯರಾಂ, ಮುಖಂಡರಾದ ಕೃಷ್ಣಯ್ಯ, ಎಂ.ಶ್ರೀನಿವಾಸ್, ಉದಯ್ ಅಂಬಿಗರ್, ಸೊಸೈಟಿ ಬಿ.ಲಿಂಗಯ್ಯ, ಈರಯ್ಯ ಕನ್ನಲಿ, ಗಂಜಾಂ ಶಿವು, ಎಂ.ಪಿ ಪೂರ್ಣಾನಂದ, ಜಿಲ್ಲಾ ಗಂಗಮತ ಬೆಸ್ತರ್ ಸಂಘದ ರಮೇಶ್ ಇತರರು ಭಾಗಿಯಾಗಿದ್ದರು.