ಸರ್ಕಾರಿ ಇಂಟರ್ ನ್ಯಾಷನಲ್ ಮಾಡೆಲ್ ಶಾಲೆ ನಿರ್ಮಾಣ: ರಾಘವೇಂದ್ರ ಹಿಟ್ನಾಳ

| Published : Jul 04 2024, 01:04 AM IST

ಸರ್ಕಾರಿ ಇಂಟರ್ ನ್ಯಾಷನಲ್ ಮಾಡೆಲ್ ಶಾಲೆ ನಿರ್ಮಾಣ: ರಾಘವೇಂದ್ರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಮೂರು ಕಡೆ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಒಳಗೊಂಡಂತೆ ₹12 ಕೋಟಿ ವೆಚ್ಚದಲ್ಲಿ ಸರ್ಕಾರಿ ಇಂಟರ್ ನ್ಯಾಷನಲ್ ಮಾಡೆಲ್ ಶಾಲೆ ನಿರ್ಮಾಣ ಮಾಡಲಾಗುವುದು.

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಿಬಿಎಸ್ಇ ವಸತಿ ಶಾಲೆ, ಪದವಿ ಪೂರ್ವ ಕಾಲೇಜಿನ ಕಟ್ಟಡ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಿಟ್ನಾಳ, ಭಾಗ್ಯನಗರ ಮತ್ತು ಕೊಪ್ಪಳದ ಶಾಸಕರ ಮಾದರಿ ಶಾಲೆ ಸೇರಿ ತಾಲೂಕಿನಲ್ಲಿ ಮೂರು ಕಡೆ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಒಳಗೊಂಡಂತೆ ₹12 ಕೋಟಿ ವೆಚ್ಚದಲ್ಲಿ ಸರ್ಕಾರಿ ಇಂಟರ್ ನ್ಯಾಷನಲ್ ಮಾಡೆಲ್ ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೊಪ್ಪಳ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಿಬಿಎಸ್ಇ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಲಿಂಗದಹಳ್ಳಿಯಲ್ಲಿಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಿಬಿಎಸ್ಇ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಉದ್ಘಾಟನೆಯಾಗಿದ್ದು ಸಂತಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 2015-16 ನೇ ಸಾಲಿನ ಬಜೆಟ್‌ನಲ್ಲಿ ಎರಡು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಒಂದು ಶಾಲೆಯನ್ನು ಕೊಪ್ಪಳ ಕ್ಷೇತ್ರಕ್ಕೆ ನೀಡಿದ್ದರು. ಸಿಬಿಎಸ್ಇ ಪಠ್ಯಕ್ರಮದ 6ರಿಂದ 12ನೇ ತರಗತಿವರೆಗೆ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ಸುಸಜ್ಜಿತವಾದ ಕಟ್ಟಡ ಲೋಕಾರ್ಪಣೆಗೊಳಿಸಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಅನೇಕ ದೊಡ್ಡ-ದೊಡ್ಡ ಯೋಜನೆಗಳನ್ನು ತರುವಂತಹ ಕೆಲಸವಾಗಿದ್ದು, ಶೈಕ್ಷಣಿಕ ರಂಗದಲ್ಲಿ ಮೊರಾರ್ಜಿ ಶಾಲೆಗಳು, ಅಬ್ದುಲ್ ಕಲಾಂ ವಸತಿ ಶಾಲೆಗಳು ಹಾಗೂ ಇತರ ಹಾಸ್ಟೆಲ್‌ಗಳಿಗೆ ಈ ವರ್ಷ ₹60 ಕೋಟಿಗಳನ್ನು ಕೊಪ್ಪಳ ಕ್ಷೇತ್ರಕ್ಕೆ ತರುವಂತಹ ಕೆಲಸವಾಗಿದೆ ಎಂದು ಹೇಳಿದರು.

ಕೊಪಳದಲ್ಲಿ ವೈದ್ಯಕೀಯ ಕಾಲೇಜು ಅಷ್ಟೇ ಅಲ್ಲದೇ ₹192 ಕೋಟಿ ವೆಚ್ಚದಲ್ಲಿ 450 ಹಾಸಿಗೆಯ ಆಸ್ಪತ್ರೆಯ ಕಟ್ಟಡ ಕಟ್ಟುವಂತಹ ಕೆಲಸವಾಗಿದ್ದು, ಶೀಘ್ರ ಆಸ್ಪತ್ರೆ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಕೊಪ್ಪಳಕ್ಕೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಕೊಡಲೇಬೇಕೆಂದು ಮುಖ್ಯಮಂತ್ರಿಗಳ ಬಳಿ ಪ್ರಸ್ತಾವನೆ ಇಡಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ 104 ಗ್ರಾಮಗಳಲ್ಲಿ 24x7 ಶುದ್ಧ ಕುಡಿಯುವ ನೀರು ಒದಗಿಸಲು ₹ 245 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಭಾಗ್ಯನಗರ-ಕೊಪ್ಪಳಕ್ಕೆ ಕುಡಿಯುವ ನೀರಿಗಾಗಿ ₹145 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ₹780 ಕೋಟಿ ಅನುದಾನದಲ್ಲಿ ನೀರಾವರಿ ಕಾಮಗಾರಿ ರೂಪಿಸಲಾಗುತ್ತಿದೆ. ಅಳವಂಡಿ-ಬೆಟಗೇರಿ ಹಾಗೂ ಬಹದ್ದೂರ್‌ಬಂಡಿ-ನವಕಲಬಂಡಿ ನೀರಾವರಿಗಾಗಿ ಈ ವರ್ಷದ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಏತ ನೀರಾವರಿಯಿಂದಾಗಿ ಕೊಪ್ಪಳ ಕ್ಷೇತ್ರವು ನೀರಾವರಿಯಾಗಲಿದೆ. ಲಿಂಗದಹಳ್ಳಿ ಮತ್ತು ಬೆವಿನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಇತರ ಕಾರ್ಯಕ್ರಮಗಳಿಗಾಗಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮುಂದಿನ ದಿನಮಾನಗಳಲ್ಲಿ ಸರ್ಕಾರದಿಂದ ಅನುದಾನವನ್ನು ತಂದು ಗ್ರಾಮಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ಲಿಂಗದಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಪಪೂ ಕಾಲೇಜು ಕಟ್ಟಡವು ಉತ್ತಮ ಗುಣಮಟ್ಟದಿಂದ ನಿರ್ಮಿಸಲಾಗಿದ್ದು, ಸಂತಸ ತಂದಿದೆ. ಈ ವಸತಿ ಶಾಲೆಯನ್ನು ಕೊಪ್ಪಳ ಕ್ಷೇತ್ರಕ್ಕೆ ತಂದಿರುವ ಶಾಸಕರ ಕಾರ್ಯವು ಶ್ಲ್ಯಾಘನೀಯವಾಗಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೊಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಾಲಚಂದ್ರನ್, ಬೆವಿನಾಳ ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷ ಮುರಳಿ ಬಿಸರಳ್ಳಿ, ಸದಸ್ಯ ಅಂಜನಪ್ಪ ಲಿಂಗದಹಳ್ಳಿ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾತಿ, ಜಿಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಹಾಗೂ ಟಿ. ಜರ್ನಾರ್ದನ ಹುಲಿಗಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.