ಗಸ್ತು ರಸ್ತೆ ನಿರ್ಮಾಣ: ಮಲೆ ಕುಡಿಯ ಕುಟುಂಬಕ್ಕೆ ಆಶಾಕಿರಣ

| Published : Feb 06 2025, 12:15 AM IST

ಸಾರಾಂಶ

ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ಸ್ತಬ್ಧವಾದ ಬಳಿಕ ಕಾಡನಂಚಿನಲ್ಲಿರುವ ಮಲೆಕುಡಿಯ ಕುಟುಂಬಗಳಿಗೆ ವನ್ಯಜೀವಿ ವಿಭಾಗವು ಗಸ್ತು ರಸ್ತೆ ನಿರ್ಮಿಸಿ ಆಶಾಕಿರಣವಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ಸ್ತಬ್ಧವಾದ ಬಳಿಕ ಕಾಡನಂಚಿನಲ್ಲಿರುವ ಮಲೆಕುಡಿಯ ಕುಟುಂಬಗಳಿಗೆ ವನ್ಯಜೀವಿ ವಿಭಾಗವು ಗಸ್ತು ರಸ್ತೆ ನಿರ್ಮಿಸಿ ಆಶಾಕಿರಣವಾಗಿದೆ.

ಗಸ್ತು ರಸ್ತೆ ನಿರ್ಮಾಣ ಏಕೆ?: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಡ್ಗಿಚ್ಚು ಹೆಚ್ಚು, ಅದರಲ್ಲೂ ಬೇಸಿಗೆಯಲ್ಲಿ ಕಾಡುಪ್ರಾಣಿಗಳು ಹಾಗೂ ಕೆಲವು ತಂಟೆಕೋರರ ಹುಲ್ಲುಹಾಸಿಗೆ ಬೆಂಕಿ ಹಚ್ಚುವವರು ಹೆಚ್ಚು. ಇದರಿಂದಾಗಿ ಬೆಂಕಿ ಆರಿಸಲು ಅರಣ್ಯ ಇಲಾಖಾ ವಾಹನಗಳು ಸಂಚರಿಸಲು ಯೋಗ್ಯವಾಗುವಂತೆ ಗಸ್ತು ರಸ್ತೆ (ಪೆಟ್ರೊಲಿಂಗ್ ಪಾಥ್) ಗಳನ್ನು ನಿರ್ಮಿಸಲಾಗುತ್ತದೆ. ಅದರಲ್ಲೂ ಬೇಸಗೆಯಲ್ಲಿ ಬೆಂಕಿ ನಿಯಂತ್ರಣಕ್ಕೆ ಗಸ್ತುರಸ್ತೆಗಳ ಮೂಲಕವೆ ಸಾಗಬೇಕು

ಹೆಬ್ರಿ ತಾಲೂಕಿನ ಮುನಿಯಾಲು ಗ್ರಾ.ಪಂ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶವಾದ ಮುಟ್ಲುಪಾಡಿ ಯಿಂದ ಸುಮಾರು ನಾಲ್ಕು ಕಿ.ಮೀ. ದೂರದ ದಟ್ಟ ಕಾಡಿನ ನಡುವೆ ಮೊರಂಟೆಬೈಲು ಎಂಬ ಪ್ರದೇಶವಿದೆ. ಇಲ್ಲಿ ಸುಮಾರು ಮೂರು ಕುಟುಂಬಗಳುಗಳು ವಾಸವಿದ್ದು ನಿತ್ಯ ಗುಡ್ಡವನ್ನು ಹತ್ತಿಕೊಂಡು ಸಾಗಬೇಕು. ಇಲ್ಲಿನವರು ಶಾಲೆಗೆ ಹೋಗಬೇಕೆಂದರೆ ನಿತ್ಯ ಎಂಟು ಕಿ.ಮೀ. ಸಾಗಿಯೆ ಮುಟ್ಲುಪಾಡಿ ಶಾಲೆಗೆ ಬರಬೇಕು. ನಾಲ್ವರು ವಿದ್ಯಾರ್ಥಿಗಳು ಶಾಲೆಗೆ ಹೋಗುತಿದ್ದಾರೆ. ಕಾಡುಪ್ರಾಣಿಗಳ ಉಪಟಳ ಸೇರಿದಂತೆ ಓರ್ವ ಅನಾರೋಗ್ಯ ಅಂಗವೈಕಲ್ಯ ಪೀಡಿತ ಯುವತಿ ಈ ಪ್ರದೇಶದಲ್ಲಿ ಇದ್ದಾರೆ.

ಯುವತಿಯ ತಂದೆ ರಾಜು ಮಲೆಕುಡಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಹೊತ್ತುಕೊಂಡೇ ಬರಬೇಕಾದ ಪರಿಸ್ಥಿತಿ ಇದೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಈ ವಿಚಾರವು ಪ್ರಸ್ತಾವನೆ ಬಂದಿದ್ದು. ತಕ್ಷಣ ಸ್ಪಂದಿಸಿದ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಂ ಬಾಬು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲಿಸಿ, ಸುಮಾರು 1.5 ಕಿ.ಮೀ. ಉದ್ದದ ಗಸ್ತು ರಸ್ತೆಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅನುಕೂಲವಾದಂತಾಗಿದೆ.

ಶತಮಾನದ ಹೋರಾಟ:

ಈ ರಸ್ತೆಗೆ ಆಗ್ರಹ ವಾಸು ಮಲೆಕುಡಿಯ ಕುಟುಂಬದ ಶತಮಾನದ ಹೋರಾಟವಾಗಿದೆ. ಈ ರಸ್ತೆ ನಿರ್ಮಾಣ ಮಾಡಲು ಗ್ರಾಮಸಭೆ, ತಾಲೂಕು ಮಟ್ಟದ ಅಹವಾಲು ಸಭೆಗಳಲ್ಲಿ ಅನೇಕ ಬಾರಿ ಮನವಿ ನೀಡಿದ್ದರು ಫಲಪ್ರದವಾಗಿರಲಿಲ್ಲ . ಆದರೆ ಬಳಿಕ ವನ್ಯಜೀವಿ ವಿಭಾಗ ವಾದ ಬಳಿಕವೂ ರಸ್ತೆ ನಿರ್ಮಾಣ ದ ಕನಸಾಗಿಯೆ ಉಳಿಯಿತು.

ಇಪ್ಪತ್ತರ ದಶಕದಲ್ಲಿ ನಕ್ಸಲ್ ಚಟುವಟಿಕೆ ಅರಂಭವಾದ ಬಳಿಕ ರಸ್ತೆ ನಿರ್ಮಾಣ ಮೂಲೆಗುಂಪಾಯಿತು. ಅದರಲ್ಲೂ ಇತ್ತೀಚೆಗೆ ನಕ್ಸಲ್ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡ ಬಳಿಕ ಅರಣ್ಯ ಪ್ರದೇಶದಲ್ಲಿ ಗಸ್ತು ಸಂಚಾರಕ್ಕೆ ವಾಹನಗಳು ಸಾಗಲು ಈ ರಸ್ತೆ ನಿರ್ಮಾಣ ಮಾಡಲಾಗಿದೆ.

..................

ವನ್ಯಜೀವಿ ವಿಭಾಗದ ವತಿಯಿಂದ ಗಸ್ತು ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಮಲೆಕುಡಿಯ ಕುಟುಂಬಗಳಿಗೆ ಆಧಾರವಾದಂತಾಗಿದೆ. ಜಿಲ್ಲಾಧಿಕಾರಿ ಸಭೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.-

-ಶಿವರಾಂ ಬಾಬು, ಡಿಎಫ್‌ಒ, ಕುದುರೆಮುಖ ವನ್ಯಜೀವಿ ವಿಭಾಗ

ಮಲೆಕುಡಿಯ ಸಂಘದ ನಿರಂತರ ಹೋರಾಟ ಸಂದ ಜಯ ಇದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡಾರು ಗ್ರಾಮದ ಮುಟ್ಲುಪಾಡಿ ಮೊರಂಟೆಬೈಲು ಪ್ರದೇಶದ ರಸ್ತೆ ಸಂಪರ್ಕಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವಂದನೆಗಳು.

-ಗಂಗಾಧರ ಗೌಡ, ಮಲೆಕುಡಿಯ ಮುಖಂಡ. ನನ್ನ ತಂದೆ ರಸ್ತೆ ನಿರ್ಮಾಣಕ್ಕಾಗಿ ಅನೇಕಬಾರಿ ಮನವಿ ಕೊಟ್ಟಿದ್ದರು, ಈಗ ನನಗೆ 80 ವರ್ಷ. ಶತಮಾನದ ಹೋರಾಟಕ್ಕೆ ಸಂದ ಜಯವಾಗಿದೆ. ಅಂಗವೈಕಲ್ಯ ಪೀಡಿತ ಮಗುವಿಗೆ ಹಾಗೂ ರಾಜು ಮಲೆಕುಡಿಯರಿಗೆ ಅನಾರೋಗ್ಯ ಸಮಸ್ಯೆ ಗಳಿದೆ. ಅನಾರೋಗ್ಯದಿಂದ ಬಳಲುತ್ತಿರುವವರನ್ನು ನಾಲ್ಕು ಕಿ.ಮೀ. ಹೊತ್ತುಕೊಂಡೆ ಸಾಗಬೇಕು. ಈ ರಸ್ತೆ ನಿರ್ಮಾಣ ದಿಂದ ತುಂಬಾ ಅನುಕೂಲವಾಗಿದೆ.

-ವಾಸು ಮಲೆಕುಡಿಯ, ಮೊರಂಟೆಬೈಲು ನಿವಾಸಿ.