ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಮಹಾ ನಗರಗಳ ಸಾಲಿನಲ್ಲಿ ರಾಣಿಬೆನ್ನೂರು ಸೇರ್ಪಡೆಗೊಂಡಿದ್ದು, ಬೆಳೆಯುತ್ತಿರುವ ನಗರದ ಸಮಗ್ರ ಅಭಿವೃದ್ಧಿಗಾಗಿ ಅವಶ್ಯವಿರುವ ರಿಂಗ್‌ ರಸ್ತೆಗಾಗಿ ಶಾಸಕ ಪ್ರಕಾಶ ಕೋಳಿವಾಡರು ಮನವಿ ಮಾಡಿದ್ದು, ಆದಷ್ಟ ಬೇಗ ರಿಂಗ್‌ ರಸ್ತೆ ನಿರ್ಮಾಣಕ್ಕಾಗಿ ಚಾಲನೆ ನೀಡಲಾಗುವುದೆಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳೆ ಹೇಳಿದರು.

ಕುಮಾರಪಟ್ಟಣ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಮಹಾ ನಗರಗಳ ಸಾಲಿನಲ್ಲಿ ರಾಣಿಬೆನ್ನೂರು ಸೇರ್ಪಡೆಗೊಂಡಿದ್ದು, ಬೆಳೆಯುತ್ತಿರುವ ನಗರದ ಸಮಗ್ರ ಅಭಿವೃದ್ಧಿಗಾಗಿ ಅವಶ್ಯವಿರುವ ರಿಂಗ್‌ ರಸ್ತೆಗಾಗಿ ಶಾಸಕ ಪ್ರಕಾಶ ಕೋಳಿವಾಡರು ಮನವಿ ಮಾಡಿದ್ದು, ಆದಷ್ಟ ಬೇಗ ರಿಂಗ್‌ ರಸ್ತೆ ನಿರ್ಮಾಣಕ್ಕಾಗಿ ಚಾಲನೆ ನೀಡಲಾಗುವುದೆಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳೆ ಹೇಳಿದರು.

ತಾಲೂಕಿನ ಚಳಗೇರಿ ಗ್ರಾಮದ ರೈಲ್ವೆ ನಿಲ್ದಾಣ ರಸ್ತೆಯ ಪಕ್ಕದ ಬೀರಲೀಗೇಶ್ವರ ದೇವಸ್ಥಾನದ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಋರ್ಷಿಗಳ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.ಚಳಗೇರಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಒಳಚರಂಡಿ, ಉತ್ತಮರಸ್ತೆ, ಹೊರಚರಂಡಿ, ಸರ್ಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ಎಪಿಎಂಸಿ ಮಾಜಿ ಅಧ್ಯಕ್ಷರು, ಗ್ರಾಮದ ಮುಖಂಡರು ಆಗಿರುವ ಸಣ್ಣತಮ್ಮಪ್ಪ ಭಾರ್ಕಿ ಅವರು ೩ ಕೋಟಿ ರು.ಗಳ ಬೇಡಿಕೆ ಇಟ್ಟಿದ್ದಾರೆ. ಅವರ ಮನವಿಯಂತೆ ಈಗಾಗಲೆ ೧ ಕೋಟಿ ರು. ಬಿಡುಗಡೆಗೊಳಿಸಿದ್ದು. ಮುಂದಿನ ಬಜೆಟ್‌ನಲ್ಲಿ ಉಳಿದ ೨ ಕೋಟಿಗಳನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.ಮಹನೀಯರನ್ನುಜಾತಿಗೆ ಸೀಮಿತಗೊಳಿಸಬೇಡಿ: ಪ್ರಪಂಚದ ಸರ್ವರೂ ಮೆಚ್ಚಿಕೊಳ್ಳುವಂಥಹ ಧರ್ಮಗ್ರಂಥವೆಂದು ಕರೆಯುವ ವಾಲ್ಮೀಕಿ ರಾಮಾಯಣವನ್ನು ರಚಿಸಿರುವ ಮಹರ್ಷಿ ವಾಲ್ಮೀಕಿ ಋರ್ಷಿಗಳನ್ನು, ಬುದ್ಧ, ಬಸವ, ಅಲ್ಲಮ ಸೇರಿದಂತೆ ಭರತ ಖಂಡದಲ್ಲಿ ೧೨ನೇ ಶತಮಾನದಲ್ಲಿ ಹಾಗೂ ಅದಕ್ಕೂ ಪೂರ್ವದಲ್ಲಿ ಅವತರಿಸಿರುವ ಸಾಧು, ಸಂತರು, ಸಿದ್ಧರು, ಸತ್ಪುರುಷ, ತತ್ವಜ್ಞಾನಿಗಳನ್ನು, ಶರಣರನ್ನು, ಮಹನಿಯರನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸಬಾರದು.

ಅವರು ಅಖಂಡ ಭಾರತದಲ್ಲಿನ ಹಾಗೂ ಪ್ರಪಂಚದ ಸಮಸ್ತ ಮಾನವಕುಲದ ಕಲ್ಯಾಣಕ್ಕಾಗಿ ನೀಡಿರುವ ಧರ್ಮ ಸಂದೇಶ ಸರ್ವರಿಗೂ, ಸರ್ವಕಾಲಕ್ಕೂಒಪ್ಪುವಂತಾಗಿದ್ದು, ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಮಗ್ರ ಮನುಕುಲವು ಸಾಗುವುದರೊಂದಿಗೆ ತಮ್ಮಜೀವನ ಸಾರ್ಥಕಪಡಿಸಿಕೊಳ್ಳಬೇಕು. ಕೇವಲ ಪೂಜಿಸುವುದಕ್ಕಾಗಿಯೇ ಮೂರ್ತಿ ಪ್ರತಿಷ್ಠಾಪಿಸುವುದಕ್ಕಿಂತ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾದಲ್ಲಿ ಅವರ ಮೂರ್ತಿಗಳನ್ನು ಪೂಜಿಸಿದ್ದು ಸಾರ್ಥಕವಾಗುತ್ತದೆ ಎಂದರು.ಶಿಕ್ಷಣದಿಂದ ಸರ್ವವನ್ನು ಸಾಧಿಸಲು ಸಾಧ್ಯ. ಸಂವಿದಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ನಮಗೆ ನೀಡಿರುವ, ಸಂವಿಧಾನ ಬದ್ಧ ಹಕ್ಕನ್ನು ಪಡೆಯಲು ಸಮಗ್ರಅಭಿವೃದ್ಧಿ ಸಾಧಿಸಲು, ಮಕ್ಕಳನ್ನು ಶಿಕ್ಷಣವಂತ ಶ್ರೀಮಂತರನ್ನಾಗಿಸಲು ಪಾಲಕರು ಮುಂದಾಗಬೇಕೆಂದು ಸಚಿವ ಜಾರಕಿಹೊಳಿ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೊಳಿವಾಡ ಅವರು ಮಾತನಾಡಿ, ಶಿಕ್ಷಣದಿಂದಲೆ ಸರ್ವವನ್ನು ಸಂಪಾದಿಸಲು ಸಾಧ್ಯವೆಂದರಿತು, ಕ್ಷೇತ್ರದಾದ್ಯಂತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ರೋಬೋ ಟೀಚರ್‌ಗಳನ್ನು ಪ್ರಾಯೋಗಿಕವಾಗಿ ಈಗಾಗಲೆ ಕೆಲ ಶಾಲೆಗಳಲ್ಲಿ ಅಳವಡಿಸಿದ್ದೆವೆ. ಮುಂದಿನ ದಿನಮಾನಗಳಲ್ಲಿ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಶಾಲೆಗಳಿಗೆ ರೋಬೋ ಟೀಚರ್‌ಗಳನ್ನು ನೀಡಲಾಗುವುದು. ರಾಣಿಬೆನ್ನೂರು ನಗರಕ್ಕೆಅವಶ್ಯವಿರುವ ರಿಂಗ್‌ ರಸ್ತೆ ನಿರ್ಮಾಣಕ್ಕೆ ಸರ್ಕಾರವು ಭರವಸೆ ನೀಡಿರುವುದು ಸಂತಸದ ವಿಷಯ ಎಂದು ತಿಳಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಣ್ಣ ಭಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಆರ್. ಶಂಕರ್, ಹರಿಹರ ಮಾಜಿ ಶಾಸಕ ಎಸ್‌. ರಾಮಪ್ಪ, ಹಾವೇರಿ ಹಾಲು ಉತ್ಪಾದಕರ ಸಹಕಾರಿ ಮಹಾ ಮಂಡಳ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಗರಸಭೆ ಮಾಜಿ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಮುಖಂಡರಾದ ಬಸನಗೌಡ ಮರದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಬುಡನ್‌ಸಾಬ ದೊಡ್ಮನಿ, ರವಿಂದ್ರಗೌಡ ಎಫ್. ಪಾಟೀಲ, ದರ್ಶನ್‌ ರುದ್ರಪ್ಪ ಲಮಾಣಿ, ಚಿರಂಜೀವಿ ಭಾರ್ಕಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರಪ್ಪ ಬೇಡರ್, ಮೌಲಾಸಾಬ ಪ್ಲಾಟ್, ಚಳಗೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಸದಸ್ಯರು ಇದ್ದರು.