ಸಮುದಾಯದ ಅಭಿವೃದ್ದಿಗೆ ರಚನಾತ್ಮಕ ಕಾರ್ಯ ಅಗತ್ಯ

| Published : Apr 04 2024, 01:02 AM IST

ಸಾರಾಂಶ

ದುಡಿಮೆಯಿಲ್ಲದ ಮತ್ತು ಶ್ರಮ ಪಡದೇ ಸಂಪತ್ತು ಬಯಸುವವರು ಬಹಳ ಜನರಿದ್ದಾರೆ. ಶ್ರಮದಿಂದ ಸಂಪಾದಿಸಿದ ಸಂಪತ್ತು ಸುಖ ಶಾಂತಿ ತಂದು ಕೊಡಬಲ್ಲದು ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ವೀರಶೈವ ಧರ್ಮದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರರು ನುಡಿದರು.

ತಾಲೂಕಿನ ಲಿಂಗದಹಳ್ಳಿ ಗ್ರಾಮದ ಹಿರೇಮಠದಲ್ಲಿ ನಿರ್ಮಿಸಿದ ಶ್ರೀ ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ. ಸಮುದಾಯದ ಅಭಿವೃದ್ದಿಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು. ಭಗವಂತನಿತ್ತ ಕೊಡುಗೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಆ ಭಗವಂತ ಕೊಟ್ಟಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ಮನುಷ್ಯನ ಧರ್ಮವಾಗಿದೆ. ದುಡಿಮೆಯಿಲ್ಲದ ಮತ್ತು ಶ್ರಮ ಪಡದೇ ಸಂಪತ್ತು ಬಯಸುವವರು ಬಹಳ ಜನರಿದ್ದಾರೆ. ಶ್ರಮದಿಂದ ಸಂಪಾದಿಸಿದ ಸಂಪತ್ತು ಸುಖ ಶಾಂತಿ ತಂದು ಕೊಡಬಲ್ಲದು. ಶ್ರಮ ಪಡದ ಸಂಪತ್ತು ಶಾಶ್ವತವಲ್ಲ. ಮನುಷ್ಯನಲ್ಲಿ ಅತಿಯಾದ ವೈಚಾರಿಕತೆ ಬೆಳೆದು ಧರ್ಮದಲ್ಲಿ ಶ್ರದ್ಧೆ, ಹಿರಿಯರಲ್ಲಿ ಗೌರವ ಕೊಡದ ಜನರು ಹೆಚ್ಚುತ್ತಿದ್ದಾರೆ. ಜೀವನೋತ್ಸಾಹಕ್ಕೆ ಯೋಗ್ಯ ಮಾರ್ಗದರ್ಶನ ಮತ್ತು ಸಂಸ್ಕಾರ ಕೊಟ್ಟರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಕಾಯಕ ಧರ್ಮ ಅನುಸರಿಸಿ ಭೌತಿಕ ಮಾರ್ಗದಲ್ಲಿ ನಡೆಯುವ ಜನ ಸಮುದಾಯಕ್ಕೆ ದಿಕ್ಸೂಚಿಯಾಗಿದ್ದಾರೆ. ಅವರ ಸರಳತೆ ಮತ್ತು ಮುಗ್ಧ ಮನೋಭಾವದಿಂದಾಗಿ ಭಕ್ತ ಸಂಕುಲದ ಸಂತೋಷಕ್ಕೆ ಕಾರಣರಾಗಿದ್ದಾರೆ ಎಂದರು.

ನೇತೃತ್ವ ವಹಿಸಿದ್ದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಹಿರೇಮಠದ ಇತಿಹಾಸದಲ್ಲಿ ಇವತ್ತಿನ ದಿನ ಅವಿಸ್ಮರಣೀಯವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಲಿಂಗದಹಳ್ಳಿ ಹಿರೇಮಠದ ಅಭಿವೃದ್ಧಿ ಮಾಡಿರುವೆ. ಈ ಭಾಗದ ಭಕ್ತರಿಗೆ ಸಂಸ್ಕಾರ ಸದ್ವಿಚಾರಗಳನ್ನು ಮನೆ ಮನಕ್ಕೆ ಮುಟ್ಟಿಸಿದ ಸಂತೃಪ್ತ ಮನೋಭಾವ ನಮ್ಮದಾಗಿದೆ ಎಂದರು. ಸಮಾರಂಭದಲ್ಲಿ ವೀರಭದ್ರ ಶಿವಾಚಾರ್ಯರಿಗೆ ರಂಭಾಪುರಿಶ್ರೀಗಳು ಪೀಠದ ವತಿಯಿಂದ ಸನ್ಮಾನ ಮಾಡಿದರು.

ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ನಾಗವಂದ ಹೊರಗಿನಮಠದ ಶಿವಾನಂದ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು.

ಶ್ರೀ ರಂಭಾಪುರಿ ಜಗದ್ಗುರು 33ನೇ ವರ್ಷದ ಪೀಠಾರೋಹಣದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನೆರವೇರಿದವು. ಹುಬ್ಬಳ್ಳಿಯ ಮಹಿಳಾ ಮಂಡಳದ ಸದಸ್ಯರಿಂದ ಭಕ್ತಿ ಗೀತೆ ಜರುಗಿತು. ಮಾಸೂರಿನ ಗುರುಪ್ರಸಾದ ಹಿರೇಮಠ ನಿರೂಪಿಸಿದರು. ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.