ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ ರೋಗಗಳು, ಉಸಿರಾಟದ ಸಮಸ್ಯೆಗಳು ಸೇರಿದಂತೆ ಅನೇಕ ಅಪಾಯಕಾರಿ ರೋಗಗಳು ಉಂಟಾಗುತ್ತವೆ ಎಂದು ಆರ್.ಜಿ.ಇ.ಎಸ್. ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರವೀಣ ಪಲ್ಲೇದ ಹೇಳಿದರು.

ಗದಗ: ತಂಬಾಕು ಪದಾರ್ಥಗಳ ಸೇವನೆ ಮಾನವ ಆರೋಗ್ಯಕ್ಕೆ ಮಾರಕವಾಗಿದೆ. ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಮುಂತಾದ ತಂಬಾಕು ಉತ್ಪನ್ನಗಳು ದೇಹದ ವಿವಿಧ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇವುಗಳ ಸೇವನೆಯಿಂದ ಕ್ಯಾನ್ಸರ್, ಹೃದಯ ರೋಗಗಳು, ಉಸಿರಾಟದ ಸಮಸ್ಯೆಗಳು ಸೇರಿದಂತೆ ಅನೇಕ ಅಪಾಯಕಾರಿ ರೋಗಗಳು ಉಂಟಾಗುತ್ತವೆ ಎಂದು ಆರ್.ಜಿ.ಇ.ಎಸ್. ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರವೀಣ ಪಲ್ಲೇದ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ನಡೆದ ಧೂಮಪಾನ ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು‌.

ಇತ್ತೀಚಿನ ದಿನಗಳಲ್ಲಿ ಯುವಜನತೆ ತಂಬಾಕು ಪದಾರ್ಥಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಆರಂಭದಲ್ಲಿ ಹವ್ಯಾಸವಾಗಿ ಪ್ರಾರಂಭವಾದುದು ಕ್ರಮೇಣ ವ್ಯಸನವಾಗಿ ಮಾರ್ಪಡುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬ ಹಾಗೂ ಸಮಾಜದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ತಂಬಾಕು ವ್ಯಸನವನ್ನು ತ್ಯಜಿಸುವುದು ಸುಲಭವಲ್ಲ, ಆದರೆ ಅಸಾಧ್ಯವೂ ಅಲ್ಲ. ಮನೋಬಲ, ದೃಢ ಸಂಕಲ್ಪ ಮತ್ತು ಕುಟುಂಬದ ಬೆಂಬಲದಿಂದ ಈ ವ್ಯಸನದಿಂದ ಮುಕ್ತರಾಗಬಹುದು. ಪುನರ್ವಸತಿ ಕೇಂದ್ರಗಳು, ವೈದ್ಯಕೀಯ ಸಲಹೆಗಳು ಹಾಗೂ ಜಾಗೃತಿ ಕಾರ್ಯಕ್ರಮಗಳು ತಂಬಾಕು ತ್ಯಜಿಸಲು ಸಹಕಾರಿ ಆಗುತ್ತವೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಪದಾರ್ಥಗಳನ್ನು ತ್ಯಜಿಸಿ, ಆರೋಗ್ಯಕರ ಮತ್ತು ಸಂತೋಷಕರ ಜೀವನವನ್ನು ನಡೆಸಬೇಕು ಎಂದರು.

ಪ್ರಾ. ಡಾ. ಎಸ್.‌ಎಂ. ಹುಲ್ಲೂರ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಪಾಠ ಪಡೆದು ತಮ್ಮ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಈ ವೇಳೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ಡಾ. ಸಿ.ಬಿ. ರಣಗಟ್ಟಿಮಠ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಜ್ಯೋತಿ ಸಿ.ವಿ ವಂದಿಸಿದರು.