ಕಾರವಾರ ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಗುರುವಾರ ಆಯೋಜಿಸಲಾಗಿದ್ದ ಸಮಕಾಲೀನ ಭಾಷೆ ತಂತ್ರಜ್ಞಾನ ಮತ್ತು ವ್ಯಾಕರಣ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಸೆಮಿನಾರ್ ಯಶಸ್ವಿಯಾಗಿ ನಡೆಯಿತು.

ಕಾರವಾರ: ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಗುರುವಾರ ಆಯೋಜಿಸಲಾಗಿದ್ದ ಸಮಕಾಲೀನ ಭಾಷೆ ತಂತ್ರಜ್ಞಾನ ಮತ್ತು ವ್ಯಾಕರಣ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಸೆಮಿನಾರ್ ಯಶಸ್ವಿಯಾಗಿ ನಡೆಯಿತು.

ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ. ಗೀತಾ ಎಸ್. ವಾಲೀಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಕಾಲೀನ ಭಾಷಾ ತಂತ್ರಜ್ಞಾನವು ಭಾಷಾ ಅಧ್ಯಯನ, ಬೋಧನೆ ಮತ್ತು ಸಂಶೋಧನೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಹೇಳಿದರು.

ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಾದಿರಾಜ ಇನಾಮದಾರ್ ಮಾತನಾಡಿ, ಸಮಕಾಲೀನ ಯುಗದಲ್ಲಿ ಭಾಷಾ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ವ್ಯಾಕರಣ ಅಧ್ಯಯನದ ಮಹತ್ವ ಮತ್ತು ಅವುಗಳ ಪರಸ್ಪರ ಸಂಬಂಧಗಳ ಕುರಿತು ಆಳವಾದ ವಿಚಾರಗಳನ್ನು ಮಂಡಿಸಿದರು.

ಸೆಮಿನಾರ್‌ನ ತಾಂತ್ರಿಕ ಅಧಿವೇಶನಗಳಲ್ಲಿ ಗದಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ರಾಮಚಂದ್ರ ಹೆಗಡೆ ಹಾಗೂ ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಪ್ರೊ. ಪ್ರವೀಣ್ ಕೊರ್ಲಹಳ್ಳಿ ಅವರು ಭಾಷಾ ಸಂಸ್ಕರಣಾ ತಂತ್ರಜ್ಞಾನ, ಯಂತ್ರಾನುವಾದ, ಡಿಜಿಟಲ್ ಮಾಧ್ಯಮಗಳ ಪ್ರಭಾವ ಹಾಗೂ ಆಧುನಿಕ ವ್ಯಾಕರಣದ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಮಹಾವಿದ್ಯಾಲಯದ ಬಿಎ ವಿದ್ಯಾರ್ಥಿಗಳಿಂದ ದಿ ಡಿಯರ್ ಡಿಪಾರ್ಟೆಡ್ ಎಂಬ ನಾಟಕ ಪ್ರದರ್ಶಿಸಲಾಯಿತು. ಸಾಮಾಜಿಕ ಮೌಲ್ಯಗಳು ಮತ್ತು ಮಾನವ ಸಂಬಂಧಗಳ ವ್ಯಂಗ್ಯಾತ್ಮಕ ಚಿತ್ರಣ ಹೊಂದಿದ್ದ ನಾಟಕವು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ಹೊಸದಾಗಿ ಆರಂಭಗೊಂಡ ಬಿಎ ಐಚ್ಛಿಕ ಇಂಗ್ಲಿಷ್ ವಿಷಯದ ಹೊಸ ಬ್ಯಾಚ್ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೆಮಿನಾರ್‌ನಲ್ಲಿ ಭಾಗವಹಿಸಿ ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ದಳವಾಯಿ, ಇಂತಹ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಪ್ರೊ. ದೀಪ್ತಿ ನಾಯ್ಕ್ ವಂದಿಸಿದರು.