ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ

| Published : Jul 27 2025, 02:01 AM IST

ಸಾರಾಂಶ

ಕಾಗವಾಡ ತಾಲೂಕಿನಿಂದ ನಾನು ನಿಶ್ಚಿತವಾಗಿಯೂ ಸ್ಪರ್ಧೆ ಮಾಡುವೆ ಮತ್ತು ನನ್ನ ಗೆಲುವು ಕೂಡ ನಿಶ್ಚಿತ

ಕನ್ನಡಪ್ರಭ ವಾರ್ತೆ ಕಾಗವಾಡ

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ (ಡಿಸಿಸಿ) ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಮತ್ತು ನನ್ನ ಗೆಲುವು ಕೂಡ ನೂರಕ್ಕೆ ನೂರಾ ಇಪ್ಪತ್ತರಷ್ಟು ನಿಶ್ಚಿತ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಚಮಕೇರಿ ಗ್ರಾಮದಲ್ಲಿ ಚಮಕೇರಿ- ಬ್ಯಾಡರಟ್ಟಿ- ಸಿಂಧೂರ ಗಡಿವರೆಗಿನ ₹9 ಕೋಟಿ ಅನುದಾನದ 8.77 ಕಿ.ಮೀ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಆದರೆ ಯಾರು ಅತೀ ಹೆಚ್ಚು ಮತಗಳನ್ನು ಪಡೆಯುತ್ತಾರೋ ಅವರೇ ಗೆಲುವು ಸಾಧಿಸುತ್ತಾರೆ. ಕಾಗವಾಡ ತಾಲೂಕಿನಿಂದ ನಾನು ನಿಶ್ಚಿತವಾಗಿಯೂ ಸ್ಪರ್ಧೆ ಮಾಡುವೆ ಮತ್ತು ನನ್ನ ಗೆಲುವು ಕೂಡ ನಿಶ್ಚಿತ ಎಂದರು.

ಸಿಎಂ ಸಿದ್ದರಾಮಯ್ಯನವರು ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಿದ್ದು, ಈ ಅನುದಾನದಲ್ಲಿ ₹25 ಕೋಟಿ ಲೋಕೋಪಯೋಗಿ ಇಲಾಖೆಗೆ, ₹12.5 ಪಂಚಾಯತ ರಾಜ್ಯ ಇಲಾಖೆಗೆ ಮತ್ತು ಇನ್ನುಳಿದ ₹12.5 ಕೋಟಿ ಶಾಸಕರ ನಿಧಿಗೆ ಹಂಚಿಕೆ ಮಾಡಲಾಗಿದೆ. ಜು.31ರೊಳಗಾಗಿ ಮುಖ್ಯಮಂತ್ರಿಗಳಿಗೆ ಕಾಮಗಾರಿಗಳ ಪಟ್ಟಿ ಕೊಡಬೇಕು ಮತ್ತು ಈ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಗಸ್ಟ್‌ 15ರೊಳಗಾಗಿ ಪೂರ್ಣಗೊಳ್ಳಲಿದೆ ಎಂದರು.

ಚಮಕೇರಿ ಸಿಂಧೂರ ಗಡಿಯ ವರೆಗೆ 8.77 ಕಿ.ಮೀ. ರಸ್ತೆ ಸುಧಾರಣೆಗೆ ₹9 ಕೋಟಿ ಲೋಕೋಪಯೋಗಿ ಅನುದಾನದಲ್ಲಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ₹20 ಲಕ್ಷ ವೆಚ್ಚದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿರುವೆ ಎಂದ ಶಾಸಕರು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡುವೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮಲ್ಲಿಕಾರ್ಜುನ ಮಗದುಮ್, ಜಿಪಂ ಇಲಾಖೆಯ ವೀರಣ್ಣಾ ವಾಲಿ, ಧುರೀಣರಾದ ಬಸವರಾಜ ಪಾಟೀಲ, ವಿಜುಗೌಡ ಪಾಟೀಲ, ರಫಿಕ್ ಪಟೇಲ್,ಶರೀಫ ಪಟೇಲ, ಅಮಸಿದ್ಧ ಮಂಗಳೂರ, ಬಸವರಾಜ ಮಗದುಮ್, ಸಿದ್ಧಾರೂಢ ನೇಮಗೌಡ, ಶಿವಪುತ್ರ ನಾಯಿಕ, ರಾಜು ಮರಡಿ, ಸೋಹಿತ ಪಾಟೀಲ,ಶುಭಂ ಪಾಟೀಲ,ನೀಲಕಂಟ ಕಾಂಬಳೆ,ರಮೇಶ ಕಾಂಬಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.