ಸಾರಾಂಶ
ಹೊಸಪೇಟೆ: ಅಧ್ಯಯನದ ವಿಷಯಕ್ಕೆ ಬಂದಾಗ ಅಸಾಧ್ಯ ಎಂಬ ಶಬ್ದಕ್ಕೆ ವಿದ್ಯಾರ್ಥಿಗಳು ಸ್ಥಾನ ಕೊಡಬಾರದು. ನಿರಂತರ ಕಲಿಕೆ ನಮ್ಮನ್ನು ಅತ್ಯುತ್ತಮ ಸಂಶೋಧಕರನ್ನಾಗಿ ತಯಾರು ಮಾಡುತ್ತದೆ ಎಂದು ಮುಧೋಳದ ರಾಷ್ಟ್ರೀಯ ಸಂಶೋಧನಾ ವೇದಿಕೆ ಗೌರವಾಧ್ಯಕ್ಷ ಡಾ. ಸಂಗಮೇಶ ಕಲ್ಯಾಣಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದ ವತಿಯಿಂದ ನಡೆದ ತಾಳೆಗರಿ ಮತ್ತು ತಾಮ್ರ ಪತ್ರಗಳ ತಯಾರಿಕೆ ಮತ್ತು ಲೇಖನಿ ನನ್ನ ಅನುಭವ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.200 ತಾಮ್ರಪಟಗಳಲ್ಲಿ ಕೆತ್ತಿರುವ ರನ್ನನ ಗದಾಯುದ್ಧ ಕೃತಿಯು ಇತಿಹಾಸದಲ್ಲಿ ಸೂರ್ಯ ಚಂದ್ರರಿರುವ ತನಕ ಅಮರವಾಗಿದೆ. ಅದನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸುತ್ತೇನೆ. ಲಿಪಿಕಾರನಿಗೆ ಇಂತಹ ಪ್ರಯತ್ನ ಬಹಳ ಮುಖ್ಯ. ತಾಳೆ ಎಲೆಗಳನ್ನು ಬರೆಯಲು ತಾಳೆಗರಿ ಆಗಿಸಬೇಕಾದರೆ ಅದರ ಸಂಸ್ಕರಣ ವಿಧಾನವನ್ನು ಎಳೆಎಳೆಯಾಗಿ ವಿವರಿಸಿದರು. ಇದರ ಮೇಲೆ ಬರೆಯಲು ಎಳೆ ಬಿಸಿಲು ಸೂಕ್ತ ಸಮಯ. ತಾಳೆಗರಿಯ ಮೇಲೆ ಬರೆಯಲು ಹಾಗೂ ತಾಮ್ರ ಪಟದ ಮೇಲೆ ಕೆತ್ತಲು ಅಪಾರ ತಾಳ್ಮೆ ಬೇಕು. ಕಣ್ಣಿನ ದೃಷ್ಟಿ, ಉಸಿರಾಟ ಪೂರಕವಾಗುತ್ತದೆ ಎಂದರು.
ಆಯುರ್ವೇದ ಹಸ್ತಪ್ರತಿಗಳ ಪ್ರಯೋಜನಗಳು ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾದ ಬಳ್ಳಾರಿಯ ವೈದ್ಯ ಎಂ. ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿರುವ ತಾಳೆಗರಿಯ ಹಸ್ತಪ್ರತಿಗಳು ನಾನು ವೈದ್ಯನಾಗುವಲ್ಲಿ ಅಧ್ಯಯನ ಮಾಡಲು ಪ್ರೇರೇಪಿಸಿವೆ. ಹಸ್ತಪ್ರತಿಗಳಲ್ಲಿ ವೈದ್ಯಕೀಯ ಶಾಸ್ತ್ರಗಳಿವೆ. ಹಸ್ತಪ್ರತಿಗಳ ಅಧ್ಯಯನದಿಂದ ವೈದ್ಯರಾಗಬಹುದು ಎಂದರು.ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಅಧ್ಯಕ್ಷತೆ ವಹಿಸಿ, ಸಾಹಿತ್ಯ ಮೂಢನಂಬಿಕೆ ಕಲಿಸುವುದಿಲ್ಲ. ವೈಚಾರಿಕತೆಯನ್ನು ಕಲಿಸುತ್ತದೆ. ಸಾಂಪ್ರದಾಯಿಕ ವಿಜ್ಞಾನವನ್ನು ಮೇಲೆ ತರುವ ಕಲ್ಪನೆ ಡಾ. ಚಂದ್ರಶೇಖರ ಕಂಬಾರ ಅವರಿಗಿತ್ತು ಎಂದರು.
ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಚನ್ನವೀರಪ್ಪ ಹಾಗೂ ಮಾಹಿತಿ ಕೇಂದ್ರದ ಡಾ. ಡಿ. ಮೀನಾಕ್ಷಿ ಮತ್ತಿತರರಿದ್ದರು. ವಿದ್ಯಾರ್ಥಿಗಳಾದ ಗೋಣಿಬಸಪ್ಪ, ಮಲ್ಲಿಕಾರ್ಜುನ, ಬಿ.ಸತೀಶ ನಿರ್ವಹಿಸಿದರು.7ಎಚ್ಪಿಟಿ5ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತಾಳೆ ಸಸ್ಯವನ್ನು ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ನೆಟ್ಟರು.