ಕುಕನೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಟಿ.ಗುರುರಾಜಗೆ ಪಟ್ಟಣದಲ್ಲಿ ವಾಹನಗಳ ಸಂಚಾರದ ವೇಗ ನಿಯಂತ್ರಿಸುವಂತೆ ಒತ್ತಾಯಿಸಿ ಹಿತರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಪಟ್ಟಣದಲ್ಲಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು,ಎಸ್‌ಎಫ್‌ಎಸ್ ಶಾಲೆಯಿಂದ ವಿದ್ಯಾನಂದ ಗುರುಕುಲ ಶಾಲೆಯವರೆಗೆ ವಾಹನಗಳ ವೇಗ ನಿಯಂತ್ರಣ ಹಾಗೂ ಸಂತೆ ಸಮಯದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಮಾಡಬೇಕು.ಪ್ರಮುಖ ರಸ್ತೆ ಸಂಚಾರ ದಟ್ಟನೆ ಹೆಚ್ಚಾಗಿದ್ದು, ಸುಂಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.ಶಾಲಾ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಹನಗಳ ವೇಗದಿಂದ ವಿದ್ಯಾರ್ಥಿಗಳಿಗೆ ಅಪಾಯ ಉಂಟಾಗುತ್ತಿದೆ. ಶಾಲಾ ವಲಯ ಎಂದು ಘೋಷಿಸಿ,ಬ್ಯಾರಿಕೆಡ್ ಅಳವಡಿಸಬೇಕು. ಪ್ರತಿ ಶುಕ್ರವಾರ ನಡೆಯುವ ತರಕಾರಿ ಸಂತೆ ಸಂದರ್ಭದಲ್ಲಿ ರಸ್ತೆ ಎರಡೂ ಬದಿಗಳಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇದರಿಂದ ವೀರಭದ್ರಪ್ಪ ವೃತ್ತದಿಂದ ಒಂದು ಕಡೆ ಸಂಚಾರ ವ್ಯವಸ್ಥೆ ಜಾರಿಗೊಳಿಸಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಪೊಲೀಸ್ ಅಧಿಕಾರಿಗಳು ಮನವಿ ಸ್ವೀಕರಿಸಿ, ಸಮಸ್ಯೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಸಹ ಸಂಚಾಲಕ ಮಂಜುನಾಥ ನಾಡಗೌಡ,ಪದಾಧಿಕಾರಿ ಅಂದಪ್ಪ ಜವಳಿ,ರಶೀದ್ ಹಣಜಗೇರಿ, ಕಳಕೇಶ ಹತ್ತಿಕಟಗಿ, ಗಂಗಾಧರ ನಾರಾಯಣಿ, ದೇವಪ್ಪ ರಾಟಿಮನಿ, ಕನಕಪ್ಪ ಬ್ಯಾಡರ್, ನಾರಾಯಣಪ್ಪ ಮುಖಪುರಿ, ಗಿರಿಧರ್ ನಿಲೋಗಲ್, ಮಹಾಂತೇಶ ಹೂಗಾರ ಇತರರಿದ್ದರು.