ಸಾರಾಂಶ
ಕುಷ್ಟಗಿ ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ. 15ರಂದು ಕುಷ್ಟಗಿ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ. 15ರಂದು ನಡೆಯುವ ಕುಷ್ಟಗಿ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸುವ ಜತೆಗೆ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಅಂಜನಾದ್ರಿ ಕಾರ್ಯಾಲಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೂರ್ನಾಲ್ಕು ವರ್ಷಗಳಿಂದ ಕುಷ್ಟಗಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯವಾಗಿರಲಿಲ್ಲ. ಫೆ. 15ರಂದು ಹೂಲಗೇರಾ ಗ್ರಾಮದಲ್ಲಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರು ಗೋಷ್ಠಿಗಳು ನಡೆಯಲಿವೆ. ಹಲವು ಕಲಾವಿದರ ತಂಡಗಳು ಭಾಗವಹಿಸಲಿವೆ. ₹8 ಲಕ್ಷಕ್ಕೂ ಅಧಿಕ ಹಣ ಬೇಕಾಗಬಹುದು. ಈಗಾಗಲೆ ಕೆಲವು ದಾನಿಗಳು ಸಹಕಾರ ನೀಡಿದ್ದಾರೆ. ಇನ್ನಷ್ಟು ಹಣಕಾಸಿನ ನೆರವು ಅಗತ್ಯವಿದೆ ಎಂದರು.
ರವೀಂದ್ರ ಬಾಕಳೆ ಮಾತನಾಡಿ, ಪೆಂಡಾಲ ವ್ಯವಸ್ಥೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ದೊಡ್ಡನಗೌಡ ಪಾಟೀಲ ವಹಿಸಿಕೊಂಡಿದ್ದಾರೆ. ಊಟದ ಜವಾಬ್ದಾರಿಯನ್ನು ಹೂಲಗೇರಾ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ. ಸ್ಮರಣ ಸಂಚಿಕೆಯ ಜವಾಬ್ದಾರಿಯನ್ನು ತಾಲೂಕಿನ ಗ್ರಾಪಂನವರು ತೆಗೆದುಕೊಂಡಿದ್ದಾರೆ. ಆಮಂತ್ರಣ ಪತ್ರಿಕೆ, ಕಲಾ ತಂಡಗಳಿಗೆ ಸಹಾಯಧನ, ಇನ್ನುಳಿದಂತೆ ಅನೇಕ ಸಾಮಗ್ರಿಗಳಿಗೆ ಹಣಕಾಸಿನ ನೆರವೂ ಬೇಕಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ನ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಅಬ್ದುಲ್ ಕರೀಂ ವಂಟೇಳಿ, ಮಂಜುನಾಥ ಗುಳೇದಗುಡ್ಡ ಇದ್ದರು.