ಸಾರಾಂಶ
ಶಿಡ್ಲಘಟ್ಟ: ಪ್ರಶ್ನೆ ಮಾಡಿದರೆ ಅಸಾಧ್ಯವೂ ಕೂಡ ಸಾಧ್ಯವಾಗುತ್ತದೆ. ಇದು ಕೆಆರ್ ಎಸ್ ಪಕ್ಷದ ಸಿದ್ಧಾಂತ. ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣದ ಅಗತ್ಯತೆಯ ಅರಿವು ಮೂಡಿಸಲು ಹಾಗೂ ಭ್ರಷ್ಟಾಚಾರ ಮುಕ್ತ ಕರ್ನಾಟಕ ಕಟ್ಟಲು ಹಲವಾರು ಜಾಗೃತಿ ಅಭಿಯಾನಗಳನ್ನು ಕೆಆರ್ ಎಸ್ ಪಕ್ಷ ನಡೆಸುತ್ತಿದೆ ಎಂದು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ವಿ.ವೇಣುಗೋಪಾಲ್ ತಿಳಿಸಿದರು. ನಗರದಲ್ಲಿ ಕೆಆರ್ ಎಸ್ ಪಕ್ಷದ ತಾಲೂಕು ಘಟಕ ಸ್ಥಾಪನೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2008ರಿಂದ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೋರಾಟ ಮಾಡುತ್ತಿರುವ ರವಿ ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಕೆಆರ್ ಎಸ್ ಪಕ್ಷದ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಶಿವಾರೆಡ್ಡಿ ಮಾತನಾಡಿ, ಪ್ರಜೆಗಳು ರಾಜಕೀಯ ಪಕ್ಷಗಳ ಗುಲಾಮರಾಗಬಾರದು, ಅವುಗಳ ಮಾಲೀಕರಾಗಬೇಕು. ಪ್ರಾದೇಶಿಕತೆ ಮತ್ತು ಒಕ್ಕೂಟ ವ್ಯವಸ್ಥೆಯ ಬಲವರ್ದನೆ ಆಗಬೇಕು ಎಂಬ ಉದ್ದೇಶದಿಂದ ಪಕ್ಷವು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಕೆಆರ್ ಎಸ್ ಶಿಡ್ಲಘಟ್ಟ ತಾಲೂಕು ಘಟಕದ ಅಧ್ಯಕ್ಷ ಪಿಂಡಿಪಾಪನಹಳ್ಳಿ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿಗಳಾದ ಆನಂದಕುಮಾರ್, ವೆಂಕಟೇಶ್, ರಾಜಶೇಖರ್, ನರಸಿಂಹಯ್ಯ, ಸಂಘಟನಾ ಕಾರ್ಯದರ್ಶಿ ಶ್ರೀನಾಥ್ ಗೌಡ ಹಾಜರಿದ್ದರು.