ಸಾರಾಂಶ
ಚಿತ್ರದುರ್ಗದಲ್ಲಿ ಡಾ.ಯುವರಾಜ್ರ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಯುವಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಡೀನ್ ಯುವರಾಜ್ ಅಮಾನತಿಗೆ ಆಗ್ರಹಿಸಿ ಮಾದಿಗ ಯುವ ಸೇನೆ ಪ್ರತಿಭಟನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವೈದ್ಯರ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ಬಂದಿರುವ ಹಿನ್ನಲೆ ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಚಿಮ್ಸ್ )ಡೀನ್ ಡಾ. ಯುವರಾಜ್ರನ್ನ ಕೆಲಸದಿಂದ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಯುವಸೇನೆವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿ ಆಕ್ರೋಶ ಹೊರ ಹಾಕಿದರು. ಚಿಮ್ಸ್ ಡೀನ್ ತಲಾ ಓರ್ವ ವೈದ್ಯ ಅಭ್ಯರ್ಥಿಗಳಿಂದ ಲಕ್ಷಾಂತರ ರು ಲಂಚ ಪಡೆದು ನೇಮಕಾತಿ ಮಾಡಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಕೆಲಸ ಮಾಡುವ ಪ್ರವೃತ್ತಿ ಇವರದ್ದಾಗಿದ್ದು ಬಿಜೆಪಿ ಏಜೆಂಟ್ ಆಗಿದ್ದಾರೆ. ಬಿಜೆಪಿಯವರ ತಳಕ್ಕೆ ತಕ್ಕಂತೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.ಅವರನ್ನುಮ ಕೂಡಲೇ ಅಮಾನತು ಮಾಡಿ ಲೋಕಾಯುಕ್ತರಿಂದಾಗಲೀ ಅಥವಾ ಸಿಐಡಿಯಿಂದ ತನಿಖೆ ಮಾಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ನೇಮಕಾತಿ ಸಂದರ್ಭದಲ್ಲಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಲಾಗಿದೆ. ಇದರಿಂದಾಗಿ ಅರ್ಹರಿಗೆ ಅನ್ಯಾಯವಾಗಿದೆ.ಹಾಲಿ ಮಾಡಿರುವ ನೇಮಕಾತಿಯ ರದ್ದುಪಡಿಸಿ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಲ್ಲಿಯವರೆಗೆ ಡೀನ್ ಅವರ ಅಮಾನತ್ತಿನಲ್ಲಿ ಇಡಬೇಕು. ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜಣ್ಣ, ಓಬಳಮ್ಮ, ತಿಪ್ಪೇಸ್ವಾಮಿ, ಸಂತೋಷ್, ಸಿದ್ದಪ್ಪ, ರುದ್ರಮುನಿ, ವೆಂಕಟೇಶ್, ಶಿವಕುಮಾರ್, ನಾಗಭೂಷಣ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.