ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಒಂದು ದೊಡ್ಡ ಗ್ರಂಥಾಲಯವಿದ್ದಂತೆ. ವಿಶ್ವಜ್ಞಾನಿಯ ಹೋರಾಟಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದು ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ತಿಳಿಸಿದರು.

ಸಮೀಪದ ಅಣ್ಣೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ, ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜನತಾ ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.

ಡಾ.ಅಂಬೇಡ್ಕರ್ ಪಡೆದಿರುವ ಶಿಕ್ಷಣವನ್ನು ನಾವೆಲ್ಲರೂ ಗೌರವಿಸಬೇಕು. ಅವರ ಬದುಕು, ಹೋರಾಟದ ಹಾದಿ, ಸಮಾನತೆಗಾಗಿ ಅಸ್ಪೃಶ್ಯತೆ ವಿರುದ್ಧ ಹೋರಾಟ, ಮಹಿಳಾ ಹಕ್ಕುಗಳು ಮತ್ತು ಕಾರ್ಮಿಕರ ಅಭ್ಯುದಯಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಯ ಜನ್ಮ ದಿನವನ್ನು ಆಚರಣೆ ಮಾಡುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಸರ್ವ ಸಮುದಾಯಗಳ ಜನರ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಹೋರಾಟ ನಡೆಸಿದ ಮಹಾನ್ ಚೇತನ. ಅವರು ರಚಿಸಿದ ವಿಶ್ವದ ಶ್ರೇಷ್ಠ ಸಂವಿಧಾನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಧಾರಸ್ತಾಂಭವಾಗಿದೆ ಎಂದರು.


ಅಭಿವೃದ್ಧಿ ಹರಿಕಾರರಾದ ರಾಜಶ್ರೀ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ದೇಶದ ಮಹಾನ್ ಸಾಧಕರು. ರಾಜ್ಯ ಅಭಿವೃದ್ಧಿಯನ್ನು ಹೇಗೆ ನಿರ್ವಹಿಸಬೇಕೆಂದು ತೋರಿಸಿಕೊಟ್ಟರು. ಇಂತಹ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಬೇಕಾಗಿದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ಯಾವುದೇ ದೌರ್ಜನ್ಯಗಳಾದರೆ ಎಸ್ಸಿ, ಎಸ್ಟಿ ಆಯೋಗಕ್ಕೆ ದೂರು ಸಲ್ಲಿಸಿ. ನಾನು ಅಧ್ಯಕ್ಷನಾದ ನಂತರ ರಾಜ್ಯದಲ್ಲಿನ 4750 ಕೇಸುಗಳಲ್ಲಿ ಸುಮಾರು 2000 ಕೇಸುಗಳನ್ನು ಇತ್ಯರ್ಥ ಪಡಿಸಿದ್ದೇನೆ. ಹಾಗೆಯೇ ಸುಮಾರು 24% ದೌರ್ಜನ್ಯ ಕೇಸುಗಳಲ್ಲಿ ಶಿಕ್ಷೆಯನ್ನು ವಿಧಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದರು.

ಸಮಾಜ ಸೇವಕ, ಉದ್ಯಮಿ ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಶೋಷಿತರು ಮತ್ತು ಅಸ್ಪೃಶ್ಯರ ದನಿಯಾಗಿ ಸ್ವಾಭಿಮಾನದ ಬದುಕಿನ ದಾರಿ ತೋರಿದ ಧೀಮಂತ ನಾಯಕ ಅಂಬೇಡ್ಕರ್. ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಹಾಗೂ ಜಾತಿ ತಾರತಮ್ಯ ವ್ಯವಸ್ಥೆ ವಿರುದ್ಧ ತಮ್ಮ ಚಳವಳಿ, ಕ್ಷಣದ ಚಿಂತನೆಗಳ ಮೂಲಕ ಹೋರಾಟ ನಡೆಸಿದ ಅಸಾಮಾನ್ಯ ಪ್ರತಿಭೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್, ಡಾ.ಭಾನುಪ್ರಕಾಶ್, ಭಾರತಿನಗರ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಕೆಪಿಸಿಸಿ ಸದಸ್ಯ ಚಿದಂಬರಮೂರ್ತಿ, ವಕೀಲರಾದ ಮಹೇಶ್, ಲಕ್ಷ್ಮಣ್, ಶಿವಣ್ಣ, ಎಂಪಿಆರ್‌ಸಿಎಸ್ ಅಧ್ಯಕ್ಷ ಪ್ರಸನ್ನ, ಜನತಾ ಸೇವಾ ಟ್ರಸ್ಟ್ ಅಧ್ಯಕ್ಷ ಪುನೀತ್,ಶಿವಕುಮಾರ್ ಎಸ್.ಅಭಿಷೇಕ, ರವಿಕುಮಾರ್, ಶಶಾಂಕ್ , ರವಿಕುಮಾರ್, ರಾಜಣ್ಣ ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.