ಸಾರಾಂಶ
ನ್ಯಾಮತಿ: ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ದಂಪತಿ ಮೆಕ್ಕೆಜೋಳ ಬೆಳೆ ರೋಗಬಾಧೆಗೆ ಇಡುವ ವಿಷದ ಗುಳಿಗೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಭಟ್ಟೋಳ್ ಷಣ್ಮುಖಪ್ಪ (62), ಪತ್ನಿ ಇಂದ್ರಮ್ಮ ಷಣ್ಮುಖಪ್ಪ (50) ಮೃತ ದುರ್ದೈವಿಗಳು. ಮದುವೆಯಾಗಿ 30 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ದಂಪತಿ ಮಾನಸಿಕವಾಗಿ ನೊಂದು, ಬೇಸರಗೊಂಡಿದ್ದರು. ಅಲ್ಲದೇ, ಭಟ್ಟೋಳ್ ಷಣ್ಮುಖಪ್ಪ ಅವರಿಗೆ ಪಾರ್ಶ್ವವಾಯು ಸಂಭವಿಸಿದ್ದರೆ, ಇಂದ್ರಮ್ಮ ಅತಿಯಾದ ಸಕ್ಕರೆ ಕಾಯಿಲೆ ರೋಗಪೀಡಿತರಾಗಿದ್ದರು.
ಮಕ್ಕಳಿಲ್ಲದ ತಮಗೆ ಜೀವನದಲ್ಲಿ ಮುಂದೆ ನಮ್ಮನ್ನು ನೋಡಿಕೊಳ್ಳುವವರು ಯಾರು ಎಂದು ಮಾನಸಿಕವಾಗಿ ನೊಂದಿದ್ದ ದಂಪತಿ, ಮೆಕ್ಕೆಜೋಳಕ್ಕೆ ಇಡುವ ವಿಷದ ಗುಳಿಗೆ ಸೇವಿಸಿದ್ದಾರೆ. ವಿಷ ಸೇವಿಸಿದಾಗ ನೋವು ತಾಳಲಾಗದೇ ಕಿರುಚಾಡಿದ್ದಾರೆ.
ಆಗ ಅಕ್ಕಪಕ್ಕದ ಮನೆಯವರು ಷಣ್ಮುಖಪ್ಪ ಅವರ ಮನೆಗೆ ನೋಡಿ, ಅಸ್ವಸ್ತ ದಂಪತಿಗೆ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಾರ್ಗಮಧ್ಯೆಯೇ ಭಟ್ಟೋಳ್ ಷಣ್ಮಖಪ್ಪ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು. ಇನ್ನು ಷಣ್ಮುಖಪ್ಪ ಅವರ ಪತ್ನಿ ಇಂದ್ರಮ್ಮ ಸಹ ರಾತ್ರಿ ಚಿಕಿತ್ಸೆ ಫಲಕಾರಿಯಾದೇ ಮೃತ ಪಟ್ಟಿದ್ದಾರೆ.
ಈ ಕುರಿತು ಸಂಬಂಧಿಕ ಉಮೇಶ್ ಭಟ್ಟೋಳ್ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.