ಸಾರಾಂಶ
ಕೊಪ್ಪ, ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಬಸ್ರಿಕಟ್ಟೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯಾದ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ನಡೆದಿದ್ದು ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಬೇಕಾದ ಅತ್ತಿಕೊಡಿಗೆ ಗ್ರಾಪಂ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಸಮರ್ಪಕ ಚರಂಡಿ ವ್ಯವಸ್ಥೆ ಆಗದೆ ಮನೆಯ ನೀರು ಕೆಸರು ಮಯವಾಗಿ ಅಂಗಡಿ ಮಳಿಗೆಗಳು ಮತ್ತು ಮನೆಯೊಳಗೆ ಹರಿಯುತ್ತಿದೆ.
ಸ್ಥಳೀಯರಿಂದ ಆಡಳಿತ ವ್ಯವಸ್ಥೆಗೆ ಹಿಡಿಶಾಪ ।
ಕನ್ನಡಪ್ರಭ ವಾರ್ತೆ, ಕೊಪ್ಪಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯ ಬಸ್ರಿಕಟ್ಟೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯಾದ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ನಡೆದಿದ್ದು ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಬೇಕಾದ ಅತ್ತಿಕೊಡಿಗೆ ಗ್ರಾಪಂ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಸಮರ್ಪಕ ಚರಂಡಿ ವ್ಯವಸ್ಥೆ ಆಗದೆ ಮನೆಯ ನೀರು ಕೆಸರು ಮಯವಾಗಿ ಅಂಗಡಿ ಮಳಿಗೆಗಳು ಮತ್ತು ಮನೆಯೊಳಗೆ ಹರಿಯುತ್ತಿದೆ.
ಕಳೆದ ೨-೩ ದಿನಗಳಿಂದ ಬಸ್ರಿಕಟ್ಟೆ ಸುತ್ತಮುತ್ತ ಭಾರಿ ಮಳೆ ಬೀಳುತ್ತಿದ್ದು ಜೆಜೆಎಂ ಪೈಪ್ ಅಳವಡಿಕೆಗೆ ತೆಗೆದುಹಾಕಿದ ಮಣ್ಣು ನೀರಿನೊಂದಿಗೆ ಸೇರಿ ಕೆಸರು ನೀರು ಅಂಗಡಿ ಮನೆಗಳೊಳಗೆ ಬರುತ್ತಿರುವುದರಿಂದ ಅಂಗಡಿ ಮಾಲೀಕರು ಹಾಗೂ ಗೃಹಿಣಿಯರು ಅಧಿಕಾರಿಗಳ ಕಾರ್ಯವೈಖರಿ ಮತ್ತು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಬಸ್ರಿಕಟ್ಟೆ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಗುಡ್ಡತೋಟ ಪ್ರದೇಶಗಳಿಂದ ಕೂಡಿದ್ದು ಜೆಜೆಎಂ ಕಾಮಗಾರಿಗೂ ಮುನ್ನ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಬೇಕಾದ ಕಾಳಜಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಇರಬೇಕು. ಇಲ್ಲಿಯ ವಾತಾವರಣ ಅದರಿಂದಾಗುವ ತೊಂದರೆಯನ್ನು ಅವರು ಅಧಿಕಾರಿಗಳಿಗೆ ತಿಳಿಹೇಳಬೇಕು. ಅದ್ಯಾವುದನ್ನೂ ಮಾಡದೆ ಇರುವುದರಿಂದ ಮಳೆನೀರು ಕೆಸರಿನೊಂದಿಗೆ ಸೇರಿ ಇಳಿಜಾರು ಭಾಗದ ಅಂಗಡಿ ಮಳಿಗೆಗಳು ಮತ್ತು ಮನೆಗಳಿಗೆ ಕೆಸರಿನ ಪ್ರವಾಹವಾಗಿ ಹರಿದಿದೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕರೆ ಸ್ವೀಕರಿಸದೆ ಇರುವುದು ದುರಾದೃಷ್ಟಕರ. ಕೂಡಲೇ ಇದನ್ನು ಸರಿಪಡಿಸದೆ ಇದ್ದಲ್ಲಿ ಮಳೆಗಾಲದ ನೀರನ್ನು ಚರಂಡಿಗೆ ಬಿಡುವುದೇ ದೊಡ್ಡ ಸಾಹಸವಾಗಿ ಕೆಸರು ನೀರಿನಲ್ಲಿಯೇ ವಾಸಿಸುವ ಸ್ಥಿತಿ ಬರ ಬಹುದು. ಮಳೆಗಾಲಕ್ಕೂ ಮುನ್ನ ಜೆಜೆಎಂ ಕಾಮಗಾರಿ ಮಣ್ಣು ಹರಿದುಬಂದು ಮನೆ ಸೇರದಂತೆ ಸಮರ್ಪಕ ಚರಂಡಿ ವ್ಯವಸ್ಥೆ ಯಾಗಲಿ ಎಂದು ಗ್ರಾಮಸ್ಥರು ಪತ್ರಿಕೆ ಮೂಲಕ ಅಧಿಕಾರಿಗಳನ್ನು ಆಗ್ರಹಿಸಿದ್ದು ಅಸಮರ್ಪಕ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.