ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ತಾಲೂಕಾಗಿ ಪರಿವರ್ತನೆಗೊಂಡಿರುವ ಮೂಡುಬಿದಿರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು ಅವುಗಳನ್ನು ಆದಷ್ಟು ಬೇಗ ಈಡೇರಿಸುವಂತೆ ಆಗ್ರಹಿಸಿ ಸಿಪಿಎಂನಿಂದ 28ರಂದು ಬೆಳಗ್ಗೆ 10ಕ್ಕೆ ಮಿನಿ ವಿಧಾನ ಸೌಧದ ಮುಂಭಾಗ ಧರಣಿ ಸತ್ಯಾಗ್ರಹ ದೊಂದಿಗೆ ಹಕ್ಕೊತ್ತಾಯ ನಡೆಯಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕುಟುಂಬಗಳಿಗೆ ಸ್ವಂತ ಜಮೀನು ಇಲ್ಲದೆ ಮನೆ ಇಲ್ಲದಂತ್ತಾಗಿದೆ ಅಂತವರಿಗೆ ನಿವೇಶನ ಮತ್ತು ವಸತಿ ನೀಡಬೇಕು, ಸರ್ಕಾರಿ ಆಸ್ಪತ್ರೆಗೆ 100 ಬೆಡ್ಗಳ ವ್ಯವಸ್ಥೆ, ತಜ್ಞ ವೈದ್ಯರು, ಆರೋಗ್ಯ ಯಂತ್ರೋಪಕರಣ, 24 ಗಂಟೆಯೂ ವೈದ್ಯರು ಲಭ್ಯವಿರಬೇಕು, ಮೂಲಭೂತ ಸೌಕಯ೯ಗಳೊಂದಿಗೆ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಐಟಿಐ ಮತ್ತು ತಾಂತ್ರಿಕ ಕಾಲೇಜು, ಗ್ರಾಮೀಣ ಪ್ರದೇಶಕ್ಕೂ ಸರಕಾರಿ ಬಸ್ ಲಭ್ಯವಾಗಬೇಕು, ಖಾಸಗಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಗಳು ನಿಲ್ಲಲು ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿ ಅಧ್ಯಾಪಕರನ್ನು ನೇಮಿಸಬೇಕು, ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಹಣ ಕಾದಿರಿಸಬೇಕು, ಕೊರಗ ಸಮುದಾಯ ವಾಸ್ತವ್ಯ ವಿರುವ ಪ್ರದೇಶ ಅಭಿವೃದ್ಧಿ ಪಡಿಸಬೇಕು. ಅವರ ಜಮೀನಿನ ದಾಖಲೆ ಪತ್ರವನ್ನು ಸಮರ್ಪಕಗೊಳಿಸಿ ಅವರಿಗೆ ವಸತಿ ವ್ಯವಸ್ಥೆ ಆಗಬೇಕು.
ಕಟ್ಟಡ ಕಾರ್ಮಿಕರ ಕಾನೂನು ಬದ್ಧ ಸೌಲಭ್ಯಗಳನ್ನು ರಕ್ಷಿಸಬೇಕು. ಅವರಿಗೆ ನೀಡಬೇಕಾದ ನ್ಯಾಯೋಚಿತ ಸೌಲಭ್ಯಗಳನ್ನು ಒದಗಿಸಬೇಕು. ಬೀಡಿ ಕಾಮಿ೯ಕರ ಕನಿಷ್ಠ ಕೂಲಿ ಪರಿಷ್ಕರಣೆ ಆಗಬೇಕು. ಬಾಕಿ ಇರುವ ತುಟ್ಟಿಭತ್ತೆ ಸೌಲಭ್ಯ ಅವರಿಗೆ ನೀಡಬೇಕು ಸಹಿತ 18 ಬೇಡಿಕೆಗಳ ಹಕ್ಕೊತ್ತಾಯ ನಡೆಯಲಿದೆ ಎಂದರು.ಸಿಪಿಎಂ ಜಿಲ್ಲಾ ಕಾಯ೯ದಶಿ೯ ಮಂಡಳಿ ಸದಸ್ಯ ವಸಂತ ಆಚಾರಿ, ಮುಖಂಡರಾದ ರಮಣಿ, ರಾಧಾ, ಲಕ್ಷ್ಮೀ, ಗಿರಿಜಾ ಹಾಜರಿದ್ದರು.