ಸಾರಾಂಶ
ಇಂದು ಮಧ್ಯಪಾನ, ತಂಬಾಕು ನಿಯಂತ್ರಣಕ್ಕೆ ಸಮಾಜ ಒಟ್ಟಾಗಿ ಪಣ ತೊಡಬೇಕಿದೆ
ಡಂಬಳ: ತಂಬಾಕು ಸೇವನೆಯಿಂದ ಮನುಷ್ಯನ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಮುಖಂಡ ಜಿ.ಎಸ್. ಕೊರ್ಲಹಳ್ಳಿ ಹೇಳಿದರು.
ಡಂಬಳ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಮಿತಿ ಬೆಳ್ತಂಗಡಿ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವಕರು ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಈ ಕುರಿತು ಅರಿವು ಮೂಡಿಸಬೇಕಿದೆ. ಇಂದು ಮಧ್ಯಪಾನ, ತಂಬಾಕು ನಿಯಂತ್ರಣಕ್ಕೆ ಸಮಾಜ ಒಟ್ಟಾಗಿ ಪಣ ತೊಡಬೇಕಿದೆ ಎಂದರು.ಮುಖ್ಯ ಅತಿಥಿಯಾಗಿ ಎ.ಕೆ. ಮುಲ್ಲಾ, ನಾಗೇಶ ಹುಬ್ಬಳ್ಳಿ ಮಾತನಾಡಿ, ತಂಬಾಕು ಸೇವನೆಯಿಂದ ಮುಕ್ತರಾಗಲು ಪಣ ತೊಡಬೇಕು ಎಂದರು.
ಸಮಾಜ ಸೇವಕ ಭೀಮಪ್ಪ ಗದಗಿನ ಮಾತನಾಡಿ, ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನ ಸಂತೋಷ ಹೆಚ್ಚಿಸುತ್ತದೆ ಧೈರ್ಯ ತುಂಬುತ್ತದೆ ಎಂಬೆಲ್ಲ ಹಸಿಕಲ್ಪನೆಗಳು ಜನರಲ್ಲಿ ಮೂಡಿರುವುದು ದುರಾದೃಷ್ಟಕರ, ಬೀಡಿ ಸಿಗರೇಟು ಗುಟ್ಕಾ ಸಾರಾಯಿಯಂತಹ ಉತ್ಪನ್ನಗಳಲ್ಲಿ 100ರಷ್ಟು ವಿಷಕಾರಿ ಹಾಗೂ ಶೇ.70 ರಷ್ಟು ಕ್ಯಾನ್ಸರಕಾರಕ ಅಂಶ ಇದೆ ಎಂದರು.ಕಾರ್ಯಕ್ರಮದಲ್ಲಿ ಸಿಎಸ್ಸಿ ನೋಡಲ್ ಅಧಿಕಾರಿ ಕಿರಣ, ಮುಂಡರಗಿಯ ಸಂಯೋಜನಾಧಿಕಾರಿ ವಿಶಾಲಾ ಮಲ್ಲಾಪುರ, ಡಂಬಳ ಗ್ರಾಮದ ಧರ್ಮಸ್ಥಳದ ಮೇಲ್ವಿಚಾರಕರ ಅಣ್ಣಪ್ಪ, ಸ್ಥಳೀಯ ಸೇವಾಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು, ಮಹಿಳಾ ಸಂಘದ ಸದಸ್ಯರು ಇದ್ದರು.