ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐ.ಪಿ.ಇ ಗ್ಲೋಬಲ್ ಸಂಸ್ಥೆ ಸಹಯೋಗದೊಂದಿಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಕೊಡಗು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹಾಗೂ ಗರ್ಭಿಣಿಯರ ಪೌಷ್ಟಿಕತೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಶುಕ್ರವಾರ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ (ಬಾಣಂತಿಯರಿಗೆ) ಆರ್ಥಿಕ ನೆರವು ನೀಡುವ ಯೋಜನೆಯಾಗಿದ್ದು, ಇದರಲ್ಲಿ ಮೊದಲನೆಯ ಮಗುವಿಗೆ ೫ ಸಾವಿರ ರು., ಎರಡನೇ ಹೆಣ್ಣು ಮಗುವಿಗೆ ೬ ಸಾವಿರ ರು. ನೀಡುತ್ತಿದ್ದು ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳಿಗೆ ಯೋಜನೆ ಬಗ್ಗೆ ಮಾಹಿತಿ ನೀಡಿ ಅರ್ಜಿ ಸಲ್ಲಿಸುವಂತೆ ತಿಳಿಹೇಳಿ ಸೌಲಭ್ಯ ಒದಗಿಸಬೇಕು ಎಂದರು.ಕೊಡಗು ಜಿಲ್ಲೆ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಐ.ಪಿ.ಇ ಸಂಸ್ಥೆಯ ರಾಜ್ಯ ಕಾರ್ಯಕ್ರಮ ಅಧಿಕಾರಿ ಮಹದೇವ್ ಮಾತೃವಂದನಾ ಯೋಜನೆಯಲ್ಲಿ ಅರ್ಜಿಸಲ್ಲಿಸುವ ವಿಧಾನದ ಕುರಿತು ವಿವರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಮಲ ಕೆ.ಜಿ., ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೇಣುಕಾ ಬಾಳಪ್ಪ ಹೊಸಮನಿ, ಶ್ರೀದೇವಿ ಮುದೋಳ್, ಪೂಣಚ್ಚ, ಶೀಲಾ ಹಾಗೂ ಮಾತೃವಂದನಾ ಯೋಜನೆ ಸಹಾಯ ಸಂಯೋಜಕರಾದ ಗಾಯಿತ್ರಿ ಮತ್ತಿತರರಿದ್ದರು. ಜೆಂಡರ್ ಸ್ಪೆಷಲಿಸ್ಟ್ ಕೇಶಿನಿ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ಮಾತೃವಂದನಾ ಸಂಯೋಜಕರು ನವ್ಯ ಸ್ವಾಗತಿಸಿದರು. ಮಿಷನ್ ಶಕ್ತಿ ಜಿಲ್ಲಾ ಸಂಯೋಜಕಿ ಮಮತಾ ವಂದಿಸಿದರು.