ಪಶ್ಚಿಮ ಘಟ್ಟಗಳು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅವು ಪರಿಸರ ಸಮತೋಲನ ಕಾಪಾಡುವ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಹೊನ್ನಾವರ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ 7ನೇ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯ ಕುರಿತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ತಜ್ಞರೊಂದಿಗೆ ಕೈಜೋಡಿಸಿ ವ್ಯಾಪಕ ಜನಜಾಗೃತಿ ಕಾರ್ಯ ನಡೆಸಬೇಕಾಗಿದೆ ಎಂದು ಮಾರುತಿ ಗುರೂಜಿ ಹೇಳಿದರು.ತಾಲೂಕಿನ ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಪಶ್ಚಿಮ ಘಟ್ಟಗಳ 7ನೇ ಕರಡು ಅಧಿಸೂಚನೆ- ಚರ್ಚೆ ಮತ್ತು ಮುಂದಿನ ಹಾದಿ ಅಂತಾರಾಜ್ಯ ಚಿಂತನ- ಮಂಥನ ಸಭೆಯಲ್ಲಿ ಮಾತನಾಡಿದರು.
ಪಶ್ಚಿಮ ಘಟ್ಟಗಳು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅವು ಪರಿಸರ ಸಮತೋಲನ ಕಾಪಾಡುವ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.ಪಶ್ಚಿಮ ಘಟ್ಟಗಳು ನಮಗೆ ನೀಡುವ ನೈಸರ್ಗಿಕ ಸಂಪತ್ತನ್ನು ಯಾವುದೇ ಮೊತ್ತದ ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಅದರ ಮಹತ್ವವನ್ನು ಜನರಿಗೆ ಅರ್ಥ ಮಾಡಿಸಬೇಕು ಎಂದರು.ಸರ್ವೋದಯ ಕರ್ನಾಟಕದ ಸಂಯೋಜಕ ಮಹಿಮಾ ಪಟೇಲ್ ಮಾತನಾಡಿ, ನಮ್ಮ ಮತಗಳು ಮಾರಾಟಕ್ಕಿಲ್ಲ. ನಮ್ಮ ಹೃದಯಗಳು ಮಾರಾಟಕ್ಕಿಲ್ಲ. ನಮ್ಮ ಸ್ವಾಭಿಮಾನವನ್ನು ಯಾವುದೇ ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎನ್ನುತ್ತಾ ಪಶ್ಚಿಮ ಘಟ್ಟಗಳ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.ಪಾನಿ ಫೌಂಡೇಶನ್ ಫಾರ್ ರಿವರ್ಸ್ನ ಮುಖ್ಯಸ್ಥೆ ಮಾಧುರಿ ಮಂಡವಾ ಮಾತನಾಡಿ, ಬೆಂಗಳೂರಿನ ನೀರಿನ ಅಗತ್ಯ ನಿರಂತರವಾಗಿ ಹೆಚ್ಚುತ್ತಿದ್ದು, ನೀರಿನ ಸಮಸ್ಯೆಗೆ ಪರಿಹಾರವಾಗಿ ಮಳೆನೀರಿನ ಸಂಗ್ರಹ ಮತ್ತು ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಪಂಪ್ಡ್ ಸ್ಟೋರೇಜ್ ಅಥವಾ ಜಲವಿದ್ಯುತ್ ಯೋಜನೆಗಳ ಬದಲಿಗೆ ಮಳೆನೀರಿನ ಸಮರ್ಪಕ ಬಳಕೆಯತ್ತ ಗಮನ ಹರಿಸಬೇಕಾಗಿದೆ ಎಂದರು.ಪರಿಯಾವರನಿ ಫೌಂಡೇಶನ್ ಅಧ್ಯಕ್ಷ ಕ್ಯಾಪ್ಟನ್ ನಿತಿನ್ ಧೋಂಡ್, ಪ್ರಮೋದ್ ಸಾಪ್ರೆ, ಗೋವಾದ ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ್ ಮಾತನಾಡಿ, ತಮಿಳುನಾಡಿನ ಕಾಳಿದಾಸನ್, ಡಾ. ಪ್ರಕಾಶ್ ಮೆಸ್ತಾ, ಡಾ. ಜಯೇಂದ್ರ ಪರುಳೇಕರ್, ಪ್ರೊ. ಕುಮಾರಸ್ವಾಮಿ, ಸುಬ್ರಹ್ಮಣ್ಯ ಭಾರತಿ ಕೊಣಾಲೆ ಅವರು ಪಶ್ಚಿಮ ಘಟ್ಟಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.ಸಭೆಯಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ ವಿವಿಧ ರಾಜ್ಯಗಳ ಪರಿಸರ ಹೋರಾಟಗಾರರು, ವಿಜ್ಞಾನಿಗಳು, ಕೃಷಿಕರು, ಸಾಮಾಜಿಕ ಕಾರ್ಯಕರ್ತರು, ಕಾನೂನು ತಜ್ಞರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ 7ನೇ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆ, ಕಸ್ತೂರಿರಂಗನ್ ವರದಿ, ಜಲಮೂಲಗಳ ರಕ್ಷಣೆ, ಸುಸ್ಥಿರ ಅಭಿವೃದ್ಧಿ, ಸ್ಥಳೀಯ ಸಮುದಾಯಗಳ ಹಿತಾಸಕ್ತಿ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಮುಂದಿನ ಕಾರ್ಯತಂತ್ರ ಕುರಿತು ಮಹತ್ವದ ಚರ್ಚೆ ನಡೆಸಿದರು.