ಸಾರಾಂಶ
ದೇಶ ಸಾಕಷ್ಟು ಸಮಸ್ಯೆ ಎದುರಿಸಿ ಇಂದು ವಿಶ್ವದ ದೊಡ್ಡ ಶಕ್ತಿಯಾಗಿ ಬೆಳೆದಿದೆ
ಧಾರವಾಡ: ಇಂದಿನ ಮಕ್ಕಳಲ್ಲಿ ದೇಶ ಭಕ್ತಿ, ದೇಶ ಪ್ರೇಮ ಹಾಗೂ ಭವ್ಯ ಭಾರತದ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಸುಮಂಗಲಾ ದಾಂಡೇವಾಲೆ ಹೇಳಿದರು.
ಇಲ್ಲಿನ ಶ್ರೀರಾಮ ವಿಠ್ಠಲ ಟ್ರಸ್ಟ್ ಶ್ರೀವಿಶ್ವೇಶ ತೀರ್ಥ ಪಬ್ಲಿಕ್ ಶಾಲೆಯಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಸಾಕಷ್ಟು ಸಮಸ್ಯೆ ಎದುರಿಸಿ ಇಂದು ವಿಶ್ವದ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಈ ಹಿಂದೆ ಪಾಲಕರು ತಮ್ಮ ಮಕ್ಕಳು ಸರ್ಕಾರಿ ಉದ್ಯೋಗ ಅಥವಾ ಖಾಸಗಿ ಕ್ಷೇತ್ರದಲ್ಲಿ ಉನ್ನತ ಸ್ಥಾನದ ಬೀಜ ಬಿತ್ತಿ ಅದರಂತೆ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಇದರಿಂದ ನಾವು ಕೇವಲ ಅಧಿಕಾರಿಗಳನ್ನು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಯಿತೆ ವಿನಃ ದೇಶಭಕ್ತ ಪ್ರಜೆಗಳನ್ನು ನೀಡಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವುಗಳು ಮುಂದಿನ 25 ವರ್ಷಗಳ ಭವ್ಯ ಭಾರತವನ್ನು ಸದೃಢವಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ದೇಶದ ಕುರಿತು ಅದರಲ್ಲೂ ಅಖಂಡ ಭಾರತದ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿದ್ದ ಗಿರಿಧರ್ ಕಿನ್ನಾಳ ಮಾತನಾಡಿ, ನಾನು 15ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದು, ಅಲ್ಲಿ ಪೋಷಕರು ಹಾಗೂ ಮಕ್ಕಳ ನಡುವೆ ಅವಿನಾಭಾವ ಸಂಬಂಧಗಳು ಇಲ್ಲ ಆದರೆ ಭಾರತದಲ್ಲಿ ಮಕ್ಕಳು ಹಾಗೂ ಪೋಷಕ ನಡುವೆ ಅತ್ಯಂತ ಸುಮಧುರ ಸಂಬಂಧಗಳು ಇದ್ದು ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯರು ಸಹ ಭಾರತೀಯ ಸಂಸ್ಕೃತಿ ಅಳವಡಿಸಿಕೊಂಡು ಸಂತೋಷದಿಂದ ಭಾರತದ ಬಗ್ಗೆ ಮಾತನಾಡುವುದನ್ನು ಕೇಳಿದಾಗ ಓರ್ವ ಭಾರತೀಯನಾಗಿ ನನಗೆ ಸಂತೋಷವಾಗುತ್ತದೆ. ಮಕ್ಕಳಲ್ಲಿ ಈಗಿನಿಂದಲೇ ಭಾರತೀಯ ಸಂಸ್ಕೃತಿಯ ಕುರಿತು ಅಭಿಮಾನ ಮೂಡಿಸುವ ಕಾರ್ಯ ಪೋಷಕರು ಮಾಡಿದರೆ ಅದಕ್ಕಿಂತ ದೊಡ್ಡದಾದ ದೇಶಪ್ರೇಮ ಮತ್ತೊಂದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ನೀಲಾಂಬರಿ ದೇಶಪಾಂಡೆ, ಕೃಷ್ಣಾ ದೇಶಪಾಂಡೆ, ಶಾರದಾ ಕುಲಕರ್ಣಿ, ಇಂದುಮತಿ ಜೋಶಿ, ಭಾವನಾ ಮುತ್ಸದ್ದಿ, ಪೂರ್ಣಿಮಾ ಕುಲಕರ್ಣಿ, ಪೋಷಕರು, ಪುಟಾಣಿ ಮಕ್ಕಳು ಇದ್ದರು.