ಸಾರಾಂಶ
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕೆಸ್ತೂರು ರಾಯಲ್ಸ್ ತಂಡದ ವತಿಯಿಂದ ಹಮ್ಮಿಕೊಂಡಿದ್ದ ಪ್ರೀಮಿಯರ್ ಲೀಗ್-೦೫ ಪಂದ್ಯಾವಳಿಯನ್ನು ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಗೀರಥ ಜಯಂತಿಯ ಅಂಗವಾಗಿ ಕೆಸ್ತೂರು ರಾಯಲ್ಸ್ ತಂಡದ ವತಿಯಿಂದ ಪ್ರೀಮಿಯರ್ ಲೀಗ್-೦೫ ಪಂದ್ಯಾವಳಿಯನ್ನು ಶನಿವಾರ ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕ್ರೀಡೆಯಾಗಿದೆ. ಭಾರತದಲ್ಲಿ ಇದು ಪ್ರತಿ ಗ್ರಾಮಗಳ ಬೀದಿಬೀದಿಗಳಲ್ಲೂ ಕಾಣುವಂತಹ ಕ್ರೀಡೆಯಾಗಿದೆ. ನಮ್ಮ ದೇಶದಲ್ಲಿ ಅನೇಕ ಪ್ರತಿಭಾವಂತ ಕ್ರಿಕೆಟ್ ಆಟಗಾರರು ಆಗಿ ಹೋಗಿದ್ದಾರೆ. ವಿಶ್ವದರ್ಜೆಯಲ್ಲಿ ಭಾರತವನ್ನು ಮೀರಿಸುವ ಆಟಗಾರರು ಇಲ್ಲವೇನೋ ಎಂದು ಭಾಸವಾಗುತ್ತದೆ. ಅಷ್ಟೊಂದು ಪ್ರತಿಭಾವಂತ ಆಟಗಾರರು ನಮ್ಮಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಅನೇಕ ಪ್ರತಿಭಾವಂತ ಕ್ರಿಕೆಟ್ ಆಟಗಾರರು ಇದ್ದಾರೆ. ಆದರೆ ಇವರ ಪ್ರತಿಭೆಗೆ ಸೂಕ್ತ ವೇದಿಕೆ ಲಭಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲೂ ಇಂತಹ ಪಂದ್ಯಾವಳಿ ಆಯೋಜನೆಗೊಂಡರೆ ಇಲ್ಲಿನ ಪ್ರತಿಭಾನ್ವಿತ ಆಟಗಾರರ ಪ್ರತಿಭೆ ಅನಾವರಣಕ್ಕೆ ವೇದಿಕೆ ಲಭಿಸಲಿದೆ ಈ ನಿಟ್ಟಿನಲ್ಲಿ ಆಯೋಜಕರ ಈ ಕೆಲಸ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಗ್ಯಾರಂಟಿ ಯೋಜನೆಯ ನಿರ್ದೇಶಕ ಡಿ. ನಾಗರಾಜು ಶಾಲೆಯ ಮುಖ್ಯ ಶಿಕ್ಷಕ ನಟರಾಜು, ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಗ್ರಾಪಂ ಸದಸ್ಯ ಗುರುಲಿಂಗಯ್ಯ, ಸಿದ್ದಪ್ಪ ಭಗೀರಥ ಸಂಘದ ಅಧ್ಯಕ್ಷ ಸಿದ್ದಪ್ಪಸ್ವಾಮಿ, ಅಭಿ, ಚೇತನ್, ಪ್ರದೀಪ್ ಸೇರಿದಂತೆ ಅನೇಕರು ಇದ್ದರು.