ಸಾರಾಂಶ
ಸಂಸ್ಕಾರದ ಕೊರತೆಯಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಮಠ-ಮಾನ್ಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೊನ್ನಾಳಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಸುನಿಲ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಂಸ್ಕಾರದ ಕೊರತೆಯಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಮಠ-ಮಾನ್ಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೊನ್ನಾಳಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಸುನಿಲ್ ಕುಮಾರ್ ತಿಳಿಸಿದರು.ಪಟ್ಟಣದ ಹಿರೇಕಲ್ಮಠದಲ್ಲಿ ದಸರಾ ಮತ್ತು ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು.
ದಾರಿ ತಪ್ಪುತ್ತಿರುವ ಯುವಪೀಳಿಗೆಃ- ಈ ಹಿಂದೆ ಯುವಕರು ಸಮಾಜಕ್ಕೆ, ಪೋಷಕರಿಗೆ ಹೆದರಿ ಅಪರಾಧಗಳನ್ನು ಮಾಡದೇ, ದುಷ್ಚಟಗಳಿಗೆ ದಾಸರಾಗದಂತೆ ಜೀವನ ನಿರ್ವಹಣೆ ಮಾಡುತ್ತಿದ್ದರು, ಆದರೆ ಇಂದು ರಾಜಾರೋಷವಾಗಿ ಮದ್ಯಪಾನ, ಬೆಟ್ಟಿಂಗ್ ಸೇರಿದಂತೆ ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೂ ಯಾವುದೇ ಅಪರಾಧಿ ಮನೋಭಾವವಿಲ್ಲದೇ ಅಡ್ಡಾಡುವುದು ಕಂಡು ಬರುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.ಕಲಿಯುಗವೆಂದು ಕರೆಯಲ್ಪಡುವ ಈ ಯುಗದಲ್ಲಿ ನಿತ್ಯ ಪತ್ರಿಕೆಗಳಲ್ಲಿ, ನ್ಯೂಸ್ ಚಾನೆಲ್ಗಳಲ್ಲಿ ಎಲ್ಲೆಂದರಲ್ಲಿ ಕಳ್ಳತನ, ದರೋಡೆ, ಮೋಸ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ-ಅತ್ಯಾಚಾರ, ಆನ್ ಲೈನ್ ಮತ್ತು ಸೈಬರ್ ಅಪರಾಧಗಳನ್ನು ಹೆಚ್ಚಾಗಿ ನೋಡುವ ಮೂಲಕ ಇದು ಕ್ರೈಂಯುಗ ಎಂದು ಕರೆಯಬಹುದು ಎಂದು ಹೇಳಲು ಬೇಸರವಾಗುತ್ತದೆ ಎಂದರು.
ಇತ್ತೀಚೆಗೆ ಸೈಬರ್ ಕ್ರೈಂ ವಿಶ್ವದಾದ್ಯಂತ ವ್ಯಾಪಿಸಿದ್ದು, ಕಳ್ಳತನ, ದರೋಡೆ ಇಂತಹ ಪ್ರಕರಣಗಳನ್ನು ಬಹು ಬೇಗನೇ ಪತ್ತೆ ಹಚ್ಚಲು ಸಾಧ್ಯವಿದ್ದು, ಆದರೆ ಆನ್ ಲೈನ್ ಕ್ರೈಂಗಳನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟವಿದ್ದು, ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಸಲಹೆ ನೀಡಿದರು.ಬ್ಯಾಂಕ್ ಖಾತೆಗಳಲ್ಲಿ ಹಣವಿದ್ದರೂ ಅದು ಸುರಕ್ಷಿತವಾಗಿರುವುದಿಲ್ಲ, ಯಾವುದೋ ಆಮಿಷವೊಡ್ಡಿ ವಾಟ್ಸಾಪ್ ಸಂದೇಶಗಳ ಮೂಲಕ ಅಥವಾ ಮೊಬೈಲ್ ನಂಬರ್ಗಳಿಗೆ ಸಂಪರ್ಕಿಸಿ ಒಟಿಪಿ ಕೇಳಿದರೆ, ಯಾವುದೇ ಕಾರಣಕ್ಕೂ ಕೊಡಾಬಾರದು. ಎಂದು ಎಚ್ಚರಿಸಿದರು.
ಪೊಲೀಸ್ ಎಂದರೆ ಭಯ ಬೇಡ ಭರವಸೆಯ ಸಂಕೇತ, ನೊಂದವರು ಮಾತ್ರವೇ ಪೊಲೀಸ್ ಠಾಣೆಗೆ ಬರುತ್ತಾರೆ, ಈ ನಿಟ್ಟಿನಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಬಗೆಹರಿಸಲೆಂದೇ ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂದರು. ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ಸಾರ್ವಜನಿಕರು ಸಮಸ್ಯೆಗಳಿಗೆ ಸಿಲುಕಿದ್ದಾಗ ಮರೆಯದೇ 112 ನಂಬರ್ಗೆ ಸಂಪರ್ಕಿಸಿದರೆ ನಿಮಗೆ ಆಯಾ ಭಾಗದ ಪೊಲೀಸರಿಂದ ಸೂಕ್ತ ನೆರವು ಸಿಗುತ್ತದೆ ಎಂದು ಮಾಹಿತಿ ನೀಡಿದರು.ವಿದ್ಯಾಶ್ರೀ ಹಿರೇಮಠ ಇವರು ನವರಾತ್ರಿ ಹಬ್ಬದ ಆಚರಣೆಯ ಬಗ್ಗೆ ಉಪನ್ಯಾಸ ನೀಡಿದರು.
ರಟ್ಟಿಹಳ್ಳಿ ಕಬ್ಬಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಅಧ್ಯಕ್ಷತೆಯನ್ನು ವಹಿಸಿ ಆಶೀರ್ವಚನ ನೀಡಿದರು. ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದರು.ಎಸ್ಜೆವಿಪಿ ಬಿಇಡಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ, ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ, ಮಠದ ಸೇವಾಕರ್ತರಾದ ಕಡದಕಟ್ಟೆ ದಾನಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ ಇತರರು ಹಾಜರಿದ್ದರು.