ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಬೆಳೆ ಹಾನಿ ಸಮೀಕ್ಷೆಗಾಗಿ ಅಧಿಕಾರಿಗಳು ಗ್ರಾಮಕ್ಕೆ ತೆರಳುವಾಗ ಗ್ರಾಮದಲ್ಲಿ ಮುಂಚಿತವಾಗಿ ಡಂಗುರ ಸಾರಿಸಿ ಬೆಳೆ ಹಾನಿ ಸಮೀಕ್ಷೆಗೆ ಹೋಗಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಭೆಗೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ಕಿರಣ್ಕುಮಾರ್ ಹರ್ತಿ ಜ.1 ರಿಂದ ಅ.28ರ ವರೆಗೆ ವಾಡಿಕೆಗಿಂತ ಶೇ.41 ರಷ್ಟು ಹೆಚ್ಚುವರಿ ಮಳೆಯಾಗಿದ್ದು, 256 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು ಹೋಬಳಿವಾರು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಟಾವಿಗೆ ಬಂದಿರುವ ಮೆಕ್ಕೆಜೋಳ ಕಳೆದ ಒಂದು ವಾರದಿಂದ ಬರುತ್ತಿರುವ ಸತತ ಮಳೆಯಿಂದಾಗಿ ರೈತರು ಯಂತ್ರಗಳನ್ನು ಬಳಸಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ, ಕಳೆಗಳು ಮಳೆಗೆ ನೆನೆದು ಕಾಳುಗಳ ಮೇಲೆ ಫಂಗಸ್ ಬೆಳೆಯುವುದರ ಜೊತೆಗೆ ಕಾಳುಗಳು ಮೊಳಕೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಕಟಾವು ಮಾಡಿದಲ್ಲಿ ಕಾಳುಗಳನ್ನು ಬೇರ್ಪಡಿಸಿ ಒಣಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ ಎಂದು ತಿಳಿಸಿದರು.ನೀರಾವರಿ ಇಲಾಖೆ ಎಂಜಿನಿಯರ್ ಮಾತನಾಡಿ, ತಾಲೂಕಿನ ಕಸಬಾ ಏತ ನೀರಾವರಿ ಯೋಜನೆ (ಕಾಳೇನಹಳ್ಳಿ)ಗೆ ₹1.8 ಕೋಟಿ ರು.ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ಕೆಇಬಿ ಅವರು ವಿದ್ಯುತ್ ಸರಬರಾಜನ್ನು ನಿಲ್ಲಿಸಿದ್ದಾರೆ ಎಂದು ಸಭೆಗೆ ವಿಷಯ ಮಂಡಿಸಿ ಹಾವೇರಿ ಜಿಲ್ಲೆಯಲ್ಲಿರುವ ಏತ ನೀರಾವರಿ ಯೋಜನೆಗೆ ₹12 ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದರೂ ವಿದ್ಯುತ್ ಸರಬರಾಜು ನಿಲ್ಲಿಸಿಲ್ಲ ಎಂದು ವಿಷಯ ಪ್ರಸ್ತಾಪ ಮಾಡಿದಾಗ ಶಾಸಕರು ವಿದ್ಯುತ್ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಕುರಿತು ಕ್ರಮವಹಿಸಿವುದಾಗಿ ಸಭೆಗೆ ತಿಳಿಸಿದರು.
ಉಪತಹಸೀಲ್ದಾರ್ ಆರಾಧ್ಯ ಮಠ ಮಾತನಾಡಿ, ತಾಲೂಕಿನಲ್ಲಿ 2 ಮಾನವ ಹಾನಿ ಪ್ರಕರಣ ಹಾಗೂ 488 ಮನೆ ಹಾನಿ ಪ್ರಕರಣ 43 ಕೊಟ್ಟಿಗೆ ಹಾನಿ ಪ್ರಕರಣ 6 ಪ್ರಾಣಿ ಹಾನಿ ಪ್ರಕರಣಗಳು ನಡೆದಿದೆ ಎಂದರು.ಅಧಿಕಾರಿಗಳು ಸಾರ್ವಜನಿಕರಿಗೆ ಮತ್ತು ರೈತರಿಗೆ ಅವರ ಸಂಕಷ್ಟಗಳಿಗೆ ಕೂಡಲೇ ಸ್ಪಂದಿಸಿ ಪರಿಹಾರವನ್ನು ಒದಗಿಸಿ ಎಂದು ಶಾಸಕರು ಸೂಚಿಸಿದರು. ಈ ಸಂದರ್ಬದಲ್ಲಿ ತಾಪಂ ಇಒ ನಾಗರಾಜ್, ಪುರಸಭಾ ಮುಖ್ಯಾಧಿಕಾರಿ ಭರತ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್ ಸೇರಿದಂತೆ ಹಲವು ಅಧಿಕಾರಿಗಳಿದ್ದರು.