ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳಲ್ಲಿ ನಾಟಕಗಳ ಅಭಿರುಚಿ ಬೆಳೆಸಬೇಕು ಎಂದು ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಡ್ಯ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಸಂಸ್ಕೃತಿ ಸಂಭ್ರಮ-ನೆಲ ಸಂಸ್ಕೃತಿ ನಾಟಕೋತ್ಸವದಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳಿಂದ ನಾಟಕಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳು, ಶಿಕ್ಷಣ, ರಂಗಭೂಮಿ ಇವು ಸೂಕ್ಷ್ಮ ಆಯಾಮಗಳಾಗಿವೆ. ಅತ್ಯಂತ ತಿರಸ್ಕಾರಕ್ಕೆ ಒಳಪಟ್ಟಿವೆ. ನಾಟಕಗಳ ವೀಕ್ಷಣೆ ಮಾಡದೇ ಖಾಲಿ ಕುರ್ಚಿಗಳಿದ್ದರೂ ಪರವಾಗಿಲ್ಲ. ಮನುಷ್ಯರು ಬರಲಿ ಅಥವಾ ಬರದೇ ಇರಲಿ. ಬಹಳ ಚೆನ್ನಾಗಿಯೇ ನಾಟಕಕ್ಕೆ ವೇದಿಕೆ ನಿರ್ಮಾಣವಾಗಿದೆ ಎಂದರು.
ಪ್ರಾಂಶುಪಾಲರು ಕೆ.ಎಂ. ಹೇಮಲತಾ ಮಾತನಾಡಿ, ಪ್ರಥಮ ಬಾರಿಗೆ ನಾಟಕ ಪ್ರದರ್ಶಿತವಾಗಿರುವುದು ಹೆಮ್ಮೆಯ ವಿಷಯ ಎಂದರು. ದೊಡ್ಡ ಬ್ಯಾಡರಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ‘ಪುಟುಕ್ ಜರ್...ಜರಾ ಡುಬುಕ್ ಮ್ಯಾ’ ನಾಟಕ ಪ್ರದರ್ಶಿಸಿದರು.
ಕೊಪ್ಪಳ ಎನ್.ಎಸ್.ಡಿ. ಷರೀಫ್ ನಿರ್ದೇಶನದ ಸೋಮನಹಳ್ಳಿ ಬ್ರಿಡ್ಜ್ ರಂಗ ಪ್ರದರ್ಶನವನ್ನು ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ರಂಗಕರ್ಮಿ ಜನಾರ್ಧನ ಜನ್ನಿ, ಸಾಹಿತಿ ಹುಲ್ಕೆರೆ ಮಹದೇವು, ಸಾಹಿತಿ ನಾಗಮಂಗಲ ಕೃಷ್ಣಮೂರ್ತಿ, ಚಿಂತಕ ಜಗದೀಶ್ ಕೊಪ್ಪ ಇದ್ದರು.