ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಗಣೇಶೋತ್ಸವದ ಮೆರವಣಿಗೆಗಳಲ್ಲಿ ವಿದೇಶಿ ಡಿಜೆಗಳನ್ನು ಹಚ್ಚಿ ಶಬ್ಧಮಾಲಿನ್ಯ ಮಾಡುವ ಬದಲು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೇಶಿ ಸಂಸ್ಕ್ರತಿ ಬೆಳೆಸಬೇಕೆಂದು ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಹೇಳಿದರು.ಚಿಮ್ಮಡ ಗ್ರಾಮದ ಬಾಹುಸಾಹೇಬರ ಮಠದಲ್ಲಿ ಆಯೋಜಿಸಲಾಗಿದ್ದ ಶಾಂತಿಪಾಲನಾ, ಜಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕ್ರತಿಯನ್ನು ವಿದೇಶಿಗರು ಅಳವಡಿಸಿಕೊಂಡು ಆರೋಗ್ಯಯುತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ನಾವೂ ವಿದೇಶಿಗರಿಗೂ ಬೇಡವಾದ ಪದ್ಧತಿಗಳನ್ನು ಅಳವಡಿಸಿಕೊಂಡು ಎಲ್ಲ ರೀತಿಗಳಿಂದಲೂ ಹಾನಿ ಅನುಭವಿಸುತಿದ್ದೇವೆ ಎಂದ ಅವರು ಮುಂಬರುವ ಗಣೇಶೋತ್ಸವ ಹಾಗೂ ಈದ್ ಮಿಲಾದ ಹಬ್ಬಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಶಾಂತರೀತಿಯಲ್ಲಿ ಆಚರಿಸಲು ಮನವಿ ಮಾಡಿದರು. ಗಣೇಶೋತ್ಸವಕ್ಕೆ ಹಲವು ಇಲಾಖೆಗಳ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಠಾಣೆಯಲ್ಲಿಯೇ ಪ್ರಾರಂಭಿಸಲಿದ್ದು, ಇದರ ಪ್ರಯೋಜನ ಪಡೆಯಬೇಕೆಂದರು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ ಮಾತನಾಡಿ, ಗ್ರಾಮದಲ್ಲಿ ನಡೆಯುವ ಯಾವುದೇ ಉತ್ಸವಗಳಲ್ಲಿ ಎಲ್ಲ ಸಮಾಜ ಬಾಂಧವರು ಪಾಲ್ಗೊಳ್ಳುವ ಮೂಲಕ ಶಾಂತಿ ಕಾಪಾಡಿಕೊಳ್ಳುತ್ತೇವೆಂದರು. ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪಾ ಪೂಜಾರಿ, ಇಲಾಹಿ ಜಮಖಂಡಿ ಮಾತನಾಡಿದರು.ಗ್ರಾಮದ ಪ್ರಮುಖರಾದ ಪುಂಡಲೀಕಪ್ಪ ಪೂಜಾರಿ, ಬಾಳಪ್ಪಾ ಹಳಿಂಗಳಿ, ರಾಮಣ್ಣ ಬಗನಾಳ, ಅಣ್ಣಪ್ಪಗೌಡ ಪಾಟೀಲ, ಬಸವರಾಜ ಕುಂಚನೂರ, ಬಿ.ಎಸ್.ಪಾಟೀಲ, ಗುರಪ್ಪಾ ಬಳಗಾರ, ರಾಚಯ್ಯ ಮಠಪತಿ, ಗ್ರಾ.ಪಂ ಸದಸ್ಯ ಮನೋಜ ಹಟ್ಟಿ, ಮಹಾಲಿಂಗ ಮಾಯಣ್ಣವರ ಸೇರಿದಂತೆ ಎಲ್ಲ ಸಮಾಜದ ಮುಖಂಡರು ಗಣೇಶೋತ್ಸವ ಸೇವಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಬೀಟ್ ಸಿಬ್ಬಂದಿ ಬಿ.ಐ.ಹುನ್ನೂರ ಹಾಗೂ ಆರ್.ಬಿ.ಪೂಜಾರಿ ನಿರ್ವಹಿಸಿದರು.--
31 ಎಂ.ಎಲ್.ಪಿ 4