ದೇವದುರ್ಗ: ಸ್ಥಳೀಯ ಎಪಿಎಂಸಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಇಲ್ಲ. ರೈತ ವಿರೋಧಿ ಚಟುವಟಕೆಗಳೇ ಹೆಚ್ಚಾಗಿದ್ದು, ಕೂಡಲೇ ಕಡಿವಾಣ ಹಾಕಬೇಕೆಂದು ರಾಜ್ಯ ರೈತ ಸಂಘ ಹಸಿರು ಸೇನೆಯ ದೇವದುರ್ಗ ಮತ್ತು ಅರಕೇರಾ ತಾಲೂಕು ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿಗೆ ಸಂಘಟನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರೈತರು ಬೆಳೆದ ಬೆಳೆಗೆ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲ. ವ್ಯವಹಾರ ಮತ್ತು ಆಹಾರ ದಾಸ್ತಾನುಗಳನ್ನು ಇಡಲು ಗೋಡಾನು ನಿರ್ಮಿಸಲಾಗಿದ್ದು, ಬೇರೆ ಉದ್ದೇಶಕ್ಕೆ ಬಾಡಿಗೆ ನೀಡಲಾಗಿದೆ. ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬಾರದು. ಕೂಡಲೇ ಎಲ್ಲಾ ವ್ಯಾಪಾರಿಗಳ ಸಭೆ ಕರೆಯಬೇಕು. ರೈತರಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಮರಿಲಿಂಗ ಪಾಟೀಲ್, ಹರ್ಷವರ್ಧನ ನಾಯಕ, ರಮೇಶ ಸಿಪ್ಪತಗೇರಾ, ಹನುಮಗೌಡ ಚಡಕಲಗುಡ್ಡ, ನಾಗರಾಜ ನಾಯಕ ತೆಗ್ಗಿಹಾಳ, ಇರ್ಫಾನ್‌ ಬುವಾಜಿ, ಅಲ್ಲಾವುದ್ದೀನ್ ಬುವಾಜಿ ಹಾಗೂ ಇತರರು ಇದ್ದರು.