ಪರಿಸರ ಜಾಗೃತಿಗಾಗಿ ಶಾಸಕರಿಂದ ಸೈಕಲ್ ಸವಾರಿ
KannadaprabhaNewsNetwork | Published : Nov 03 2023, 12:30 AM IST
ಪರಿಸರ ಜಾಗೃತಿಗಾಗಿ ಶಾಸಕರಿಂದ ಸೈಕಲ್ ಸವಾರಿ
ಸಾರಾಂಶ
ಕನಕಪುರ: ಸೈಕಲ್ ಸವಾರಿ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿದೆಎಂದು ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ ತಿಳಿಸಿದರು.
ಕನಕಪುರ: ಸೈಕಲ್ ಸವಾರಿ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿದೆಎಂದು ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ ತಿಳಿಸಿದರು. ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ತಮ್ಮ ತಂಡದೊಂದಿಗೆ ಸೈಕಲ್ ಜಾಥಾ ಮೂಲಕ ನಗರಕ್ಕೆ ಆಗಮಿಸಿ, ಚನ್ನಬಸಪ್ಪ ವೃತ್ತದ ಬಳಿಯ ರತ್ನ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಮಾತನಾಡಿ, 1974ರಲ್ಲೇ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಜಾಥಾ ಹೋಗಿ ಬಂದಿದ್ದು, ಸೈಕಲ್ ಗೂ ನನಗೂ ಅವಿನಾಭಾವ ಸಂಬಂಧವಿದೆ ಎಂದರು. ರಾಜಾಜಿನಗರ ಮೆಡಲ್ ಪವರ್ ಸಂಸ್ಥೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಹಲವು ಸ್ಥಳಗಳಿಗೆ ಸೈಕಲ್ ಜಾಥಾ ಮಾಡುತ್ತಿದ್ದು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಸೈಕಲ್ ಅತ್ಯುತ್ತಮ ಸಾಧನ. ಜೊತೆಗೆ ಶುದ್ಧ, ಸ್ವಚ್ಛ ಪರಿಸರಕ್ಕೆ ಸಹಕಾರಿಯಾಗಿದೆ. ಇಂದು ಕನಕಪುರ ಮಾರ್ಗವಾಗಿ ಮಳವಳ್ಳಿ ಮೂಲಕ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಗೆ ಸಂಜೆ ವೇಳೆಗೆ ತಲುಪುವುದಾಗಿ ತಿಳಿಸಿದರು. ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ನಾಗರಾಜು ಮಾತನಾಡಿ, ರಾಜ್ಯದ ಅತ್ಯಂತ ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಸುರೇಶ್ ಕುಮಾರ್ ಅವರ ಆದರ್ಶಗಳು ಇಂದಿನ ಯುವಕರಿಗೆ ಮಾದರಿಯಾಗಿವೆ. ಈ ಇಳಿವಯಸ್ಸಿನಲ್ಲೂ ಸೈಕಲ್ ಜಾಥಾ ಮೂಲಕ ಪರಿಸರ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವಂತಹ ಅವರ ಹುಮ್ಮಸ್ಸಿಗೆ ಶುಭವಾಗಲಿ ಎಂದು ಹಾರೈಸಿ ಸೈಕಲ್ ಜಾಥಾ ಬೀಳ್ಕೊಟ್ಟರು. ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, 2020ನೇ ಸಾಲಿನಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ ಸುರೇಶ್ ಕುಮಾರ್ ರವರು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಶೋಷಿತ ವರ್ಗಗಳ ಜನರಿಗಾಗಿ ಶಿಕ್ಷಣ ಕ್ರಾಂತಿಯನ್ನೇ ಹುಟ್ಟು ಹಾಕಿದ ಫುಲೆ ದಂಪತಿಯ ಜನ್ಮ ದಿನಾಚರಣೆಯನ್ನ ರಾಜ್ಯಾದ್ಯಂತ ಆಚರಿಸುವಂತೆ ಸುತ್ತೋಲೆ ಹೊರಡಿಸುವ ಮೂಲಕ ಫುಲೆ ದಂಪತಿಯ ಇತಿಹಾಸವನ್ನು ರಾಜ್ಯದ ಜನಕ್ಕೆ ಪರಿಚಯಿಸಿದರು ಎಂದು ತಿಳಿಸಿದರು. ಕೆ ಕೆ ಪಿ ಸುದ್ದಿ 02: ಸೈಕಲ್ ಜಾಥಾ ಕನಕಪುರ ಮಾರ್ಗವಾಗಿ ಮಳವಳ್ಳಿ ಮೂಲಕ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಗೆ ತಲುವುದಾಗಿ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.