ಸಾರಾಂಶ
ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಬಳಿಯ ವಸತಿಗೃಹದಲ್ಲಿ ಕುಕ್ಕರ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 8 ಭಕ್ತರು, ಲಾಡ್ಜ್ ಕಾರ್ಮಿಕರು ಸೇರಿ 15 ಜನರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಬಳಿಯ ವಸತಿಗೃಹದಲ್ಲಿ ಕುಕ್ಕರ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 8 ಭಕ್ತರು, ಲಾಡ್ಜ್ ಕಾರ್ಮಿಕರು ಸೇರಿ 15 ಜನರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.ಬೆಂಗಳೂರಿನ ರಾಮಸ್ವಾಮಿ ಚಿಕ್ಕಪುಳ್ಳಪ್ಪ (42), ವೆಂಕಟೇಶ ಕೃಷ್ಣಪ್ಪ (53), ರತ್ನಮ್ಮ ಗೋವಿಂದಪ್ಪ (48), ಗಣೇಶ ರಮೇಶಪ್ಪ ಕರೂರ (30), ಗದಗ ಜಿಲ್ಲೆಯ ಪ್ರಸಾದ ಜಾಧವ (34) ಮತ್ತು ಯಾದಗಿರಿ ಜಿಲ್ಲೆಯ ಬಸಮ್ಮ ಬಿರಾದಾರ (56), ಸುಮಿತ್ರಾ ಯಕ್ಕಹಳ್ಳಿ (42) ಮತ್ತು ಸಿದ್ದಮ್ಮ ಶೆಟಗೇರಿ ಗಾಯಗೊಂಡವರು. ಅವರೆಲ್ಲರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಡ್ಜ್ನ 7 ಕಾರ್ಮಿಕರನ್ನು ಸವದತ್ತಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಗಳೂರು ಮತ್ತು ಯಾದಗಿರಿ ಮೂಲದ ಭಕ್ತರು ಲಾಡ್ಜ್ನಲ್ಲಿ ಕೊಠಡಿ ಪಡೆದು ಅಡುಗೆ ಮಾಡುತ್ತಿದ್ದ ವೇಳೆ ಮೊದಲು ಕುಕ್ಕರ್ ಸಿಡಿದು ಸಿಲಿಂಡರ್ ಹಾಗೂ ಒಲೆಯ ಮೇಲೆ ಬಿದ್ದಿದೆ. ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.