ಬಂಟ್ವಾಳ: ಶಾಲಾ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅತ್ಯಾಧುನಿಕ ಸೌಕರ್ಯದ ಶಿಕ್ಷಣ ಸರ್ಕಾರಿ ಶಾಲೆ ಮೂಲಕ ಮಕ್ಕಳಿಗೆ ಸುಲಭವಾಗಿ ದೊರೆಯಬೇಕು ಎಂಬ ಆಶಯದಲ್ಲಿ ದಡ್ಡಲಕಾಡು ಸರಕಾರಿ ಶಾಲೆ ಮಾದರಿ ಹೆಜ್ಜೆಗಳೊಂದಿಗೆ ಪೋಷಕರ ಮನ ಗೆದ್ದಿದೆ. ಸರ್ವರಿಗೂ ಉತ್ತಮ ಶಿಕ್ಷಣ ನೀಡುವುದೇ ದಡ್ಡಲಕಾಡು ಶಾಲೆಯ ಆಶಯ ಎಂದು ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.
ಅತ್ಯಧಿಕ ಮಕ್ಕಳಿರುವ ದಡ್ಡಲಕಾಡು ಪಿಎಂಶ್ರೀ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾದ ಹಿನ್ನೆಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಪ್ರೌಢಶಾಲೆ ವಿಭಾಗದ ಎಸ್ ಡಿಎಂಸಿ ಅಧ್ಯಕ್ಷ ಶೇಖರ್ ಅಂಚನ್, ಪ್ರಾಥಮಿಕ ವಿಭಾಗದ ಎಸ್ ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಗೌಡ, ಪ್ರಮುಖರಾದ ರಾಜೇಶ್ ನೆಕ್ಕರೆ, ರಾಮಚಂದ್ರ ಪೂಜಾರಿ ಕರೆಂಕಿ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶೈಲೇಂದ್ರ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಜಯಶ್ರೀ, ಸಂಸ್ಥೆಯ ಹಿರಿಯ ಶಿಕ್ಷಕಿ ಹಿಲ್ಡಾ ಫೆರ್ನಾಂಡಿಸ್, ಶಿಕ್ಷಕರಾದ ವಿಕ್ರಂ ಉಪಸ್ಥಿತರಿದ್ದರು. ಶಿಕ್ಷಕಿ ವಿನಯ ಪ್ರಾರ್ಥಿಸಿದರು. ದೀಕ್ಷಿತಾ ಸನ್ಮಾನಿತರ ವಿವರ ವಾಚಿಸಿದರು. ಭವ್ಯ ಹಾಗೂ ಅನುಶ್ರೀ ನಿರೂಪಿಸಿದರು.
ಪನ್ನೀರು, ಪುಷ್ಪಾರ್ಚನೆ:ಸಭಾ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಸ್ಥಳೀಯವಾಗಿ ಭವ್ಯ ಮೆರವಣಿಗೆಯಲ್ಲಿ ಶಾಲೆಗೆ ಆಗಮಿಸಿದರು. ಶಾಲೆಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಭವ್ಯ ಸ್ವಾಗತ ಕೋರಿದರು. ಪನ್ನೀರಿನ ಜತೆಗೆ ಪುಷ್ಪಾರ್ಚನೆ ಮಾಡಿ ಮಕ್ಕಳನ್ನು ಬರ ಮಾಡಿಕೊಳ್ಳಲಾಯಿತು.