ಪ್ರತಿದಿನ ಯೋಗ ಅಭ್ಯಸಿಸಿ

| Published : Jun 22 2025, 01:18 AM IST

ಸಾರಾಂಶ

ಪ್ರತಿಯೊಬ್ಬರಲ್ಲಿಯೂ ಸದೃಢವಾದ ಆರೋಗ್ಯ ಇರಬೇಕಾದರೆ ನಿರಂತರವಾಗಿ ಪ್ರತಿದಿನ ಯೋಗ ಮಾಡಬೇಕು.

ಗೋಕರ್ಣ: ಇಲ್ಲಿನ ಕೆನರಾ ಶಿಕ್ಷಣ ಪ್ರಸಾರಕ ಆಡಳಿತ ಮಂಡಳಿಯ ಭದ್ರಕಾಳಿ ಸಮೂಹ ಶಿಕ್ಷಣ ಸಂಸ್ಥೆಗಳಿಂದ ೧೧ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.

ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ.ಎನ್. ನಾಯಕ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ಸದೃಢವಾದ ಆರೋಗ್ಯ ಇರಬೇಕಾದರೆ ನಿರಂತರವಾಗಿ ಪ್ರತಿದಿನ ಯೋಗವನ್ನು ಮಾಡಬೇಕು. ಆಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಪುನಶ್ಚೇತನಗೊಳ್ಳುವುದರೊಂದಿಗೆ ರೋಗ ರುಜಿನ ಬಾರದಂತೆ ಉತ್ತಮ ಆರೋಗ್ಯವನ್ನು ಇಟ್ಟುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಯೋಗವನ್ನು ಕಟ್ಟುನಿಟ್ಟಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.

ಖ್ಯಾತ ಯೋಗ ಶಿಕ್ಷಕ ನಾಗೇಂದ್ರ ಭಟ್ಟ ಯೋಗದ ಮಹತ್ವ ವಿವರಿಸಿದರು. ನಂತರ ವಿವಿಧ ಭಂಗಿಗಳನ್ನು ಮತ್ತು ವಿಭಿನ್ನ ಆಸನಗಳನ್ನು ಪ್ರಾತ್ಯಕ್ಷಿಕವಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಹೇಳಿಕೊಡುವ ಮೂಲಕ ಯೋಗಾಭ್ಯಾಸ ನಡೆಯಿತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಗುರುಪ್ರಕಾಶ್ ಜಿ.ಹೆಗಡೆ, ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ರಾಮಮೂರ್ತಿ ಎನ್. ನಾಯಕ, ಶಾಲೆಯ ಮುಖ್ಯಾಧ್ಯಾಪಕರಾದ ಸಿ.ಜಿ. ನಾಯಕ ದೊರೆ, ಹಿರಿಯ ಉಪನ್ಯಾಸಕರಾದ ಎನ್.ಎಸ್. ಲಮಾಣಿ, ಆಂಗ್ಲ ಮಾಧ್ಯಮದ ಮುಖ್ಯಾಧ್ಯಾಪಕಿ ರೇವತಿ, ಆರ್. ಮಲ್ಲನ್, ಹಿರಿಯ ಶಿಕ್ಷಕರಾದ ಆರ್.ಜಿ. ನಾವಡ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ.ನಾಯಕ, ಪದವಿ ವಿಭಾಗದ ಪ್ರಾಚಾರ್ಯರಾದ ಸತ್ಯನಾರಾಯಣ ಎನ್.ಎಂ., ಭದ್ರಕಾಳಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ವಿಭಾಗದ ಹಾಗೂ ಆಂಗ್ಲ ಮಾಧ್ಯಮದ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.