ಸಾರಾಂಶ
ವಿದ್ಯಾರ್ಥಿಗಳು ಹಾಲು ಸಂಗ್ರಹ ಡೈರಿಗೆ ಭೇಟಿ ನೀಡಿ ರೈತರು ಮತ್ತು ಡೈರಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಡೈರಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಆಲೇಕಟ್ಟೆ ರಸ್ತೆಯಲ್ಲಿರುವ ಹಾಲು ಸಂಗ್ರಹ ಡೈರಿಗೆ ಭೇಟಿ ನೀಡಿದ ಯಡೂರು ಬಿಟಿಸಿಜಿ ಕಾಲೇಜಿನ ವಿದ್ಯಾರ್ಥಿಗಳು, ಹೈನುಗಾರಿಕೆಯ ಬಗ್ಗೆ ರೈತರು ಹಾಗೂ ಡೈರಿ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಡೈರಿಗೆ ಭೇಟಿ ನೀಡಿದ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಾದ ಕಾವ್ಯ, ಅಂಕಿತ, ಚೈತನ್ಯ ಅವರು, ಡೈರಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಸರ್ಕಾರದಿಂದ ಡೈರಿಗಳ ಮೂಲಕ ಹೈನುಗಾರರಿಗೆ ಸಿಗುವ ಸವಲತ್ತುಗಳು, ಫೀಡ್ಸ್, ಔಷಧಿಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಂದ್ರ ಅವರು ವಿವರಣೆ ಒದಗಿಸಿದರು.ಹಾಲಿನ ಗುಣಮಟ್ಟ, ಹವಾಮಾನ ವೈಪರೀತ್ಯದಿಂದ ಹಾಲಿನ ಉತ್ಪಾದನೆ ಮೇಲೆ ಆಗುವ ಏರಿಳಿತ, ಹಸುಗಳ ಸಾಕಾಣಿಕೆ, ಮೇವು, ಹಾಲಿನ ಸಾಗಾಟ, ಸಂಗ್ರಹ, ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಬೇಡಿಕೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು.