ಕನ್ನಡಪ್ರಭ ವಾರ್ತೆ ಸಕಲೇಶಪುರ
ದಲಿತರು ಸ್ವಾಭಿಮಾನ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ ಹೇಳಿದರು. ಗುರುವಾರ ಪಟ್ಟಣದಲ್ಲಿ ಜೆಡಿಎಸ್ ಎಸ್ಸಿಎಸ್ಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಹಾಗೂ ತಾಲೂಕಿನಲ್ಲಿ ದಲಿತರನ್ನು ಕೇವಲ ಓಟ್ ಬ್ಯಾಂಕ್ನ್ನಾಗಿ ಪರಿಗಣಿಸಿರುವ ಕಾಂಗ್ರೆಸ್ ಎಲ್ಲ ಹಂತದಲ್ಲೂ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ ನ್ಯಾಯವಾಗಿ ದೊರಕಬೇಕಿರುವ ಯಾವ ಹಕ್ಕುಗಳು ಸಹ ದೊರೆಯುತ್ತಿಲ್ಲ. ದಲಿತರು ಸ್ವಾಭಿಮಾನ ಮರೆತಿರುವ ಪರಿಣಾಮವನ್ನು ಇದು ಸೂಚಿಸುತ್ತಿದೆ. ತಾಲೂಕಿನಲ್ಲಿ ದಲಿತ ಮುಖಂಡನ ಮೇಲೆ ಹಲ್ಲೆ ನಡೆದಾಗ ಪ್ರತಿಭಟಿಸಬೇಕಿದ್ದ ದಲಿತರು ಸ್ವಾಬಿಮಾನ ಮರೆತು ಸುಮ್ಮನಾಗಿದ್ದಾರೆ. ೯೪ಸಿ,೯೪ ಸಿಸಿ ಹಾಗೂ ಫಾರಂ ೫೩ರ ಅಡಿಯಲ್ಲಿ ಜಮೀನು ಹಂಚಿಕೆಯಲ್ಲಿ ತಾಲೂಕಿನ ದಲಿತರಿಗೆ ಅನ್ಯಾಯವಾಗುತ್ತಿದೆ. ಕಂದಾಯ ಸಚಿವರು ತಾಲೂಕಿಗೆ ಆಗಮಿಸಿ ಆರು ತಿಂಗಳು ಕಳೆದರೂ ಇದುವರೆಗೆ ಯಾರಿಗೂ ಹಕ್ಕುಪತ್ರ ನೀಡಲಾಗಿಲ್ಲ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸವು ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ದಲಿತರಿಗೆ ಅನ್ಯಾಯವಾದಾಗ ಸಿಡಿದೆದ್ದು ನ್ಯಾಯ ಕೇಳುವ ರೂಢಿಯನ್ನು ಕರಗತ ಮಾಡಿಕೊಳ್ಳಬೇಕಿದೆ. ನಮ್ಮ ಶಾಸಕತ್ವದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ ಎಲ್ಲಿಯೂ ನಮ್ಮ ಹೆಸರು ಹಾಕಿಕೊಂಡಿಲ್ಲ. ಮಾಡುವ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ. ಹೊರತು ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕಿದರೆ ಜನರು ಮೆಚ್ಚುವುದಿಲ್ಲ. ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಕೇವಲ ಚುನಾವಣೆ ಉದ್ದೇಶ ಹೊರತುಪಡಿಸಿ ಜನಪರ ಕಾರ್ಯದಲ್ಲಿ ತೊಡಗಿಕೊಳ್ಳುವತ್ತ ಕೆಲಸ ಮಾಡಬೇಕು. ಸದ್ಯದಲ್ಲಿ ಜೆಡಿಎಸ್ ಎಲ್ಲ ವಿಭಾಗಗಳಿಗೂ ಪದಾಧಿಕಾರಿಗಳ ನೇಮಕವಾಗಲಿದ್ದು ಪಕ್ಷದ ಬಗ್ಗೆ ನಿಷ್ಠೆ ಹೊಂದಿರುವ ಹಾಗೂ ಸಕ್ರಿಯ ವ್ಯಕ್ತಿಗಳಿಗೆ ಮಾತ್ರ ಹುದ್ದೆ ನೀಡಲಿದ್ದೇವೆ. ಹಿಂದಿನ ಚುನಾವಣೆ ಸೋಲನ್ನು ಮರೆತು ಪಕ್ಷ ಸಂಘಟನೆಯತ್ತ ಗಮನಹರಿಸಿ. ಸೋಲಿನ ಕಾರಣಗಳನ್ನು ಪರಾಮರ್ಶೆ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಿಗೆ ಆಸ್ಪದವಾಗದಂತೆ ಕೆಲಸ ಮಾಡಲಾಗುವುದು. ಎನ್ಡಿಎ ಹೈಕಮಾಂಡ್ ಸೂಚಿಸಿದ ವ್ಯಕ್ತಿಗೆ ಚುನಾವಣೆಯಲ್ಲಿ ಕೆಲಸ ಮಾಡುವುದು ಎಲ್ಲರಿಗೂ ಅನಿವಾರ್ಯ. ಕೇವಲ ಚುನಾವಣೆಗಾಗಿ ಕೆಲಸ ಮಾಡದೆ ಜನರ ಸೇವೆಯಲ್ಲಿ ಸಂತೃಪ್ತಿ ಪಡುವ ಗುಣ ಬೆಳಸಿಕೊಳ್ಳ ಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಕಾಡಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದಾಗ ಮಾತ್ರ ಕಾರ್ಯಕರ್ತರಿಗೆ ಬೆಲೆ ನಮ್ಮಲ್ಲಿ ಯಾವುದೇ ಭಿನ್ನಮತವಿದ್ದರೂ ಚುನಾವಣೆ ವೇಳೆ ಇದನ್ನು ಪ್ರದರ್ಶಿಸದೇ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಒಂದು ಕುಟುಂಬದಂತೆ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದಲ್ಲಿ ನಮ್ಮ ಶಾಸಕರು ಇರಲಿದ್ದಾರೆ ಎಂದರು.ಈ ವೇಳೆ ಜೆಡಿಎಸ್ ಮುಖಂಡರಾದ ಚಂಚಲಾ ಕುಮಾರಸ್ವಾಮಿ, ಹೆನ್ನಲಿ ಈರಯ್ಯ, ಹಾನುಬಾಳ್ ಗೋಪಾಲ್, ಬಾಳ್ಳು ಧರ್ಮ, ಮಂಜುಳಾ, ರುಕ್ಮಿಣಿ ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.