ಸಾರಾಂಶ
- ರೇಣುಕಾ ಮಂದಿರದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಡಗ್ಸ್ ಕತ್ತಲ ಪ್ರಪಂಚ. ಬಡದೇಶ ಹಾಗೂ ಶ್ರೀಮಂತ ದೇಶವನ್ನು ಕಾಡುತ್ತಿರುವ ಸಮಸ್ಯೆಯೇ ಈ ಡಗ್ಸ್ ಮಾಫಿಯಾ. ಇದಕ್ಕೆ ಯುವಜನರು ಬಲಿಯಾದಲ್ಲಿ ಕುಟುಂಬವೇ ನಾಶವಾಗುತ್ತದೆ. ಈ ಜಾಲದ ಬಗ್ಗೆ ಅರಿತು ಯುವಸಮೂಹ ದೂರವಿರಬೇಕು ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದರು.
ನಗರದ ಪಿ.ಬಿ. ರಸ್ತೆಯ ರೇಣುಕಾ ಮಂದಿರದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶವನ್ನು ನಾಶ ಮಾಡಲು ಅಣುಬಾಂಬ್ ಬೇಕಿಲ್ಲ, ಈ ಡಗ್ಸ್ ಎಂಬುದು ಇದ್ದರೆ ಸಾಕು. ಆ ದೇಶವೇ ನಾಶವಾಗುತ್ತದೆ ಎಂದರು.ಇಂದಿನ ಯುವಕರು ತಂದೆ, ತಾಯಿ ಹಾಗೂ ಗುರುಗಳ ಋಣ ಎಂದಿಗೂ ಮರೆಯಬಾರದು. ಡಗ್ಸ್ ಮಾರಾಟ ಮಾಡುವವರು ನಿಮ್ಮನ್ನು ಸೆಳೆಯುತ್ತಾರೆ, ದುರ್ಮಾಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸೂಚನೆ ಸಿಕ್ಕ ತಕ್ಷಣ 1933 ಅಥವಾ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆಮಾಡಿ ಮಾಹಿತಿ ತಿಳಿಸಿಬೇಕು ಎಂದರು.
ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠ್ಠಲ್ ರಾವ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವ ಮೊದಲು ಕುಟುಂಬದ ಭವಿಷ್ಯದ ಕುರಿತು ಆಲೋಚಿಸಬೇಕು. ಮಾದಕ ವಸ್ತುಗಳ ಮಾರಾಟ ಅಪರಾಧ. ಯುವಕರು ಇಂತಹ ಮಾದಕ ವಸ್ತುಗಳಿಂದ ದೂರವಿರುವ ಮೂಲಕ ಮಾನವ ಸಂಪನ್ಮೂಲ ಕಾಪಾಡಿಕೊಳ್ಳಬೇಕಾಗಿದೆ ಎಂದರು.ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. 1987ರಂದು ವಿಶ್ವ ಸಂಸ್ಥೆಯ ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವ ನಿರ್ದಿಷ್ಟ ಆಚರಣೆಯನ್ನು ಜಾರಿಗೆ ತರಲಾಯಿತು. ವಿದ್ಯಾರ್ಥಿಗಳ ಭವಿಷ್ಯ ಬಹಳ ಮುಖ್ಯ. ಆದ್ದರಿಂದ ನಾವು 300ಕ್ಕೂ ಹೆಚ್ಚು ಶಾಲೆ, 1000ಕ್ಕೂ ಹೆಚ್ಚು ಮಕ್ಕಳಿಗೆ ಇದರ ಕುರಿತು ಅರಿವು ಮೂಡಿಸಿದ್ದೇವೆ. ಜಿಲ್ಲೆಯಲ್ಲಿ 3 ವರ್ಷದಲ್ಲಿ 409 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದ ಅವರು, ಎನ್ಡಿಪಿಎಸ್ ಆಕ್ಟ್ ಪ್ರಕಾರ ಡಗ್ಸ್ ಮಾರಾಟ ಮಾಡಿದರೆ ಶಿಕ್ಷೆ ಇರುತ್ತದೆ ಎಂದರು.
ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಾದಕ ದ್ರವ್ಯದ ಕುರಿತು ಪ್ರಬಂಧ ಬರೆದಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಡಿಡಿಪಿಐ ಕೊಟ್ರೇಶ್, ಚಲನಚಿತ್ರ ನಟಿ ಅದಿತಿ ಪ್ರಭುದೇವ್, ಅಧಿಕಾರಿಗಳು ಇತರರು ಭಾಗವಹಿಸಿದ್ದರು.- - -
-26ಕೆಡಿವಿಜಿ40:ದಾವಣಗೆರೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮವನ್ನು ಪೊಲೀಸ್ ಅಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಉದ್ಘಾಟಿಸಿ ಮಾತನಾಡಿದರು.