ಕನ್ನಡಪ್ರಭ ವಾರ್ತೆ ಮಾಲೂರು

ತಿಗಳ ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೊಂದೇ ಮಾರ್ಗವಾಗಿರುವುದರಿಂದ ತಿಗಳ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರಿನ ಡ್ರೈವಿನ್‌ ಥಿಯೇಟರ್‌ ಮಾಲೀಕ, ಕೆ.ಎನ್.ಫೌಂಡೇಷನ್‌ ಅಧ್ಯಕ್ಷ ರಾಜ್‌ಕೃಷ್ಣಮೂರ್ತಿ ಹೇಳಿದರು.ಅವರು ಇಲ್ಲಿನ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ವರ್ಷದಿಂದ ನಮ್ಮ ಫೌಂಡೇಷನ್‌ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ತನ್ನ ಸಾಮಾಜಿಕ ಸೇವೆಯ ಭಾಗವಾಗಿ ಉತ್ಸವ್‌ ಕಾರ್ಯಕ್ರಮದಡಿಯಲ್ಲಿ ಶಿಕ್ಷಣದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.

ಮಾರ್ಚ್‌ 1ರಂದು ಕಾರ್ಯಕ್ರಮ

ಮಾರ್ಚ್‌ ಒಂದರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದ್ರೌಪದಿ ಪ್ರವರ ದರ್ಪಣ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ,ಈ ಕಾರ್ಯಕ್ರಮದಲ್ಲಿ ವಹ್ನಿಕುಲ ಸಮುದಾಯದ ಕುಲದೇವತೆ ಆದಿಶಕ್ತಿ ದ್ರೌಪದಿ ಅಮ್ಮನವರ ಪವಿತ್ರ ಸಂಪ್ರದಾಯಗಳನ್ನು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಕರಗ ಪೂಜಾರಿಗಳಿಗೆ ಸುಕೃತ ಧರ್ಮಪಾಲ ಎಂಬ ಬಿರುದು ಹಾಗೂ ಕರಗ ಪೂಜಾರಿಗಳನ್ನು ಬೆಂಬಲಿಸುವ ಪತ್ನಿಯರ ನಿಸ್ವಾರ್ಥ ಸಮರ್ಪಣೆಯನ್ನು ಗುರುತಿಸಿ ಸುಮಾರು 200 ಕರಗ ಪೂಜಾರಿಗಳ ಧರ್ಮಪತ್ನಿಯರಿಗೆ ಸುಧರ್ಮ ಧರ್ಮ ಪತ್ನಿ ಎಂಬ ಬಿರುದು ನೀಡಿ ಗೌರವಿಸಲಾಗುತ್ತಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ವಹ್ನಿಕುಲದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಹೆಚ್ಚಿನ ವಿವರಕ್ಕಾಗಿ ಮೊಬೈಲ್‌ ನಂ.9845707108/8123467463/9844017211/9964007050 ನ್ನು ಸಂಪರ್ಕಿಸಲು ಮನವಿ ಮಾಡಿದರು.ಮಾರಿಕಾಂಬ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಿ. ವೆಂಕಟೇಶ್‌, ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಅಧ್ಯಕ್ಷ ಎಂ.ಪಿ. ವಿಜಯಕುಮಾರ್‌ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ,ಯಜಮಾನ ಪೆರಮಾಳ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ, ರಾಜಪ್ಪ,ಸದಸ್ಯ ರಾಮಮೂರ್ತಿ ಇನ್ನಿತರರು ಇದ್ದರು.