ಎಸ್ಸಿ, ಎಸ್ಟಿ ನೌಕರರಿಗೆ ಪದೋನ್ನತಿ ನೀಡಲು ದಸಂಸ ಒತ್ತಾಯ

| Published : Jun 25 2024, 12:35 AM IST

ಸಾರಾಂಶ

ಚಿಕ್ಕಮಗಳೂರು, ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಮೀಸಲಾತಿಯನ್ನು ರೋಸ್ಟರ್ ನಿಯಮದ ಪ್ರಕಾರ ಕಡ್ಡಾಯವಾಗಿ ಜಾರಿಗೊಳಿಸಿ ಪದೋನ್ನತಿ ನೀಡಬೇಕು ಎಂದು ದಸಂಸ ಜಿಲ್ಲಾ ಮುಖಂಡ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ತಿಮ್ಮಪ್ಪಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ದಸಂಸ ಜಿಲ್ಲಾ ಮುಖಂಡ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ತಿಮ್ಮಪ್ಪಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಮೀಸಲಾತಿಯನ್ನು ರೋಸ್ಟರ್ ನಿಯಮದ ಪ್ರಕಾರ ಕಡ್ಡಾಯವಾಗಿ ಜಾರಿಗೊಳಿಸಿ ಪದೋನ್ನತಿ ನೀಡಬೇಕು ಎಂದು ದಸಂಸ ಜಿಲ್ಲಾ ಮುಖಂಡ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ತಿಮ್ಮಪ್ಪಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.ಹಲವಾರು ವರ್ಷಗಳ ಹಿಂದೆಯೇ ಬ್ಯಾಂಕಿನಲ್ಲಿ ಪ.ಜಾತಿ ಮತ್ತು ಪಂಗಡದ ನೌಕರರು ನೇಮಕಾತಿಗೊಳಿಸಿದೆ. ಆದರೆ, ಬ್ಯಾಂಕಿನ ಎರಡನೇ ಬ್ಯಾಚ್‌ನ ನೌಕರರಿಗೂ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ್ದು, ಈ ಜೇಷ್ಟತಾ ಪಟ್ಟಿ ಸರಿಯಿಲ್ಲವೆಂದು ಹಿಂದಿನಿಂದಲೂ ಆಕ್ಷೇಪಣೆ ಸಲ್ಲಿಸಲಾಗಿದೆ. ಯಾವ ಮಾನದಂಡದಿಂದ ತಯಾರಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ಬ್ಯಾಂಕ್‌ ನೌಕರರಿಗೆ ಪದೋನ್ನತಿ ನೀಡಿರುವುದಿಲ್ಲ. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿ ವಿರುದ್ಧ ಹಿರಿಯ ನೌಕರರು ಮೊಕದ್ದಮೆ ಹೂಡಿದ ಬಳಿಕ ಕೇಸ್ ಹಿಂಪಡೆಯಲು ಮಾಜಿ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಪ.ಜಾತಿ, ಪಂಗಡದ ನೌಕರರಿಗೆ ಮೀಸಲಾತಿ ನೀಡುತ್ತೇವೆಂದು ನಿರ್ಣಯ ಕೈಗೊಂಡ ಬಳಿಕ ಕೇಸ್‌ ಹಿಂಪಡೆಯಲಾಗಿದೆ.ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ.ಜಾತಿ, ಪಂಗಡದ ನೌಕರರಿಗೆ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿ ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿರುತ್ತಾರೆ. ಆದರೆ, ಚಿಕ್ಕ ಮಗಳೂರಿನಲ್ಲಿ ಮಾತ್ರ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿ ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿಲ್ಲ ಎಂದು ಆರೋಪಿಸಿದರು. ಸಂಘಗಳ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ನೇಮಕಾತಿ ಮತ್ತು ಪದೋನ್ನತಿ ಎರಡರಲ್ಲೂ ಸರ್ಕಾರದ ನಿಯಮದ ಪ್ರಕಾರ ಮೀಸಲಾತಿ ಅನ್ವಯ ಪದೋನ್ನತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ರಮೇಶ್, ಮುಖಂಡರಾದ ಸೋಮಶೇಖರ್ ಸರಪನಹಳ್ಳಿ, ಸೋಮಶೇಖರ್ ಬಸವನಹಳ್ಳಿ, ಚೇತನ್ ಹಿರೇಮಗಳೂರು ಇದ್ದರು.

24 ಕೆಸಿಕೆಎಂ 3ಎಸ್ಸಿ, ಎಸ್ಟಿ ನೌಕರರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಮೀಸಲಾತಿಯನ್ನು ರೋಸ್ಟರ್ ನಿಯಮದ ಪ್ರಕಾರ ಕಡ್ಡಾಯವಾಗಿ ಜಾರಿ ಗೊಳಿಸಿ ಪದೋನ್ನತಿ ನೀಡಬೇಕೆಂದು ಆಗ್ರಹಿಸಿ ದಸಂಸ ಜಿಲ್ಲಾ ಮುಖಂಡರು ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ತಿಮ್ಮಪ್ಪಗೆ ಸೋಮವಾರ ಮನವಿ ಸಲ್ಲಿಸಿದರು.