ಸಹಕಾರ ವಿಜಯೋತ್ಸವ ಹಾಗೂ ಸಾಧಕ ಹೊಟೇಲ್ ಉದ್ಯಮಿಗಳಿಗೆ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಮೈಸೂರು
ಆಹಾರ ಪದ್ಧತಿಯ ಉದ್ಯಮಕ್ಕೆ ಸರ್ಕಾರವು ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ, ಹೊಟೇಲ್ ಉದ್ಯಮಿಗಳು ಸರ್ಕಾರದ ಯೋಜನೆ ಸದುಪಯೋಗಪಡಿಸಿಕೊಂಡು ಉದ್ಯಮ ಬೆಳೆಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರದ ಯಾದವಗಿರಿಯಲ್ಲಿರುವ ದಾಸಪ್ರಕಾಶ್ ಪ್ಯಾರಡೈಸ್ ಹೊಟೇಲ್ ಸಭಾಂಗಣದಲ್ಲಿ ಹೊಟೇಲ್ ಮಾಲೀಕರ ಪತ್ತಿನ ಸಹಕಾರ ಸಂಘವು ಗುರುವಾರ ಆಯೋಜಿಸಿದ್ದ ಸಹಕಾರ ವಿಜಯೋತ್ಸವ ಹಾಗೂ ಸಾಧಕ ಹೊಟೇಲ್ ಉದ್ಯಮಿಗಳಿಗೆ ಅಭಿನಂದನಾ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದಿಶಾ ಸಭೆ ನಡೆಸಿದಾಗ ಕಳೆದ ಒಂದು ವರ್ಷದೊಳಗ ಮುದ್ರಾ ಯೋಜನೆಯ ಮೂಲಕ 2.50 ಲಕ್ಷ ಜನರಿಗೆ 3 ಸಾವಿರ ಕೋಟಿ ನೀಡಲಾಗಿದೆ ಮಾಹಿತಿ ನೀಡಿದರು. ಅದರಲ್ಲಿ ಜಿಲ್ಲೆಯ 300 ಜನರಿಗೆ ಹೊಟೇಲ್ ಉದ್ಯಮ ಆರಂಭಿಸಲು ಸಾಲ ನೀಡಲಾಗಿದೆ ಎಂದರು.ಪ್ರಸ್ತುತ ಉನ್ನತ ಹುದ್ದೆ ಆಯ್ಕೆ ಹೆಚ್ಚಿದೆ. ಅದರ ನಡುವೆಯೂ ಅನೇಕ ಯುವಕರು ಹೊಟೇಲ್ ಉದ್ಯಮದ ಕಡೆ ಬರುತ್ತಿರುವುದು ಉದ್ಯಮ ಬೆಳೆಯುತ್ತಿರುವುದರ ಸೂಚಕ. ಮೈಸೂರಿನಲ್ಲಿ ಮಹಿಳೆಯರೂ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ ಎಂದ ಅವರು ಶ್ಲಾಘಿಸಿದರು.
ಇದೇ ವೇಳೆ ಮಹೇಶ್ ಪ್ರಸಾದ್ ಹೊಟೇಲ್ ಮಾಲೀಕ ಕೆ. ಪ್ರಕಾಶ್ ಶೆಟ್ಟಿ, ಲೋಕ ಸಾಗರ್ ಮಾಲೀಕ ಎನ್.ಜಿ. ಚಂದ್ರೇಗೌಡ, ಆಶೀರ್ವಾದ್ ಗ್ರಾಂಡ್ ಗ್ರೂಪ್ಸ್ ನ ಸಿದ್ದಿಕಿ, ನ್ಯೂ ದುರ್ಗಾ ಸ್ವೀಟ್ಸ್ ಮತ್ತು ಬೇಕರಿಯ ಸುಬ್ರಮಣಿ, ಹಿರಿಯ ಟ್ರಾಫಿಕ್ ವಾರ್ಡನ್ ಮಹೇಶ್ ಮತ್ತು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ ಎ.ಸಿ. ರವಿ ಅವರನ್ನು ಸನ್ಮಾನಿಸಲಾಯಿತು.ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಯುಕ್ತೇಶಾನಂದ, ಗೋಪಾಲಗೌಡ ಸ್ಮಾರಕ ನ್ಯೂರೋ ಕೇರ್ಸೆಂಟರ್ಡಾ. ಸುಶೃತ್ ಗೌಡ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಸಂಘದ ಅಧ್ಯಕ್ಷ ನಾರಾಯಣ ಹೆಗಡೆ, ಮಾಜಿ ಅಧ್ಯಕ್ಷರಾದ ಎಂ. ಕೃಷ್ಣದಾಸ ಪುರಾಣಿಕ್, ಸುಧಾಕರ್ ಎಸ್. ಶೆಟ್ಟಿ, ಸುಬ್ರಮಣ್ಯ ಆರ್. ತಂತ್ರಿ, ಎಂ. ಆನಂದ ಶೆಟ್ಟಿ ಮೊದಲಾದವರು ಇದ್ದರು.