ಸಾರೆಗಮಪ ಕಲಾ ತಂಡದಿಂದ ದಸರಾ ದರ್ಬಾರ

| Published : Oct 05 2024, 01:41 AM IST

ಸಾರಾಂಶ

ಬೀದರ್‌ನ ಸಾರೆಗಮಪ ಕಲಾ ತಂಡದಿಂದ ದಸರಾ ದರ್ಬಾರ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಇದೇ ಅ.7 ರಿಂದ 11ರ ವರೆಗೆ ನವರಾತ್ರಿ ಉತ್ಸವ ನಿಮಿತ್ತ ಪ್ರತಿ ವರ್ಷದಂತೆ, ಈ ವರ್ಷವು ದಸರಾ ದರ್ಬಾರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ ಎಂದು ಸಾರೆಗಮಪ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಮುಖ್ಯಸ್ಥ ಮಹೇಶಕುಮಾರ ಕುಂಬಾರ ತಿಳಿಸಿದ್ದಾರೆ.

ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪ್ರತಿ ವರ್ಷದಂತೆ ಈ ವರ್ಷವು ಕೂಡ ನಾಡಿನ

ಪ್ರಸಿದ್ಧ ಕಲಾವಿದರಿಂದ ಜಿಲ್ಲೆಯಾದ್ಯಾಂತ ದಸರಾ ದರ್ಬಾರ ಎನ್ನುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಜಾನಪದ, ತತ್ವಪದ ಮತ್ತು ದೇಶ ಭಕ್ತಿಗೀತೆಗಳನ್ನೊಳಗೊಂಡ ಸಂಗೀತ ಕಾರ್ಯಕ್ರಮವು ಕಲಾವಿದರಾದ ಧೋಂಡಿರಾಮ ಧುರ್ವೆ, ಬಲರಾಮ ಪಾಂಚಾಳೆ, ಜೆಸ್ಲಿ ಸೋನವಾನೆ, ಪ್ರೀಯಾ ಗುರುದೇವ, ಮಹೇಶ್ವರಿ ಎಸ್. ಪಾಂಚಾಳ ಮತ್ತು ಮಹಾರಾಷ್ಟ್ರದ ಖ್ಯಾತ ಸಂಗೀತ ನಿರ್ದೇಶಕ ಜಬ್ದಾರ ಮುರ್ಷದ ಮತ್ತು ಧನಂಜಯ ಅವರ ನೇರವಾದ್ಯರೊಂದಿಗೆ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ ಎಂದು ಹೇಳಿದರು.

ಅಕ್ಷಯ ಅವರ ನಿರ್ದೇಶನದಲ್ಲಿ ನೃತ್ಯೋತ್ಸವ ಕಾಯಕ್ರಮ ಜರುಗಲಿದ್ದು, ಈ ಎಲ್ಲಾ ಕಾರ್ಯಕ್ರಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕುಂಬಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅ.7ರ ಸಂಜೆ 6 ರಿಂದ ಚಿದ್ರಿ ರಸ್ತೆಯಲ್ಲಿರುವ ಜೈ ಮಾತಾದಿ ಸೇವಾ ಸಂಘದಿಂದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ಅ.8ರಂದು ಮಂಗಳವಾರ 6 ರಿಂದ ಶಿವಾಜಿನಗರ ಗೆಳೆಯರ ಬಳಗದಿಂದ ಅಲ್ಲಿಯ ಹನುಮಾನ ಮಂದಿರದಲ್ಲಿ, ಅ. 9ರಂದು ಬಸವಕಲ್ಯಾಣದ ಹಿಂಗುಲಾಂಬಿಕಾ ಮಾತಾ ದೇವಸ್ಥಾನದಲ್ಲಿ, ಅ.10ರ ಸಂಜೆ 6 ರಿಂದ ಬೀದರ್ ಭೀಮನಗರದಲ್ಲಿರುವ ಜೈ ಜಗದಂಬಾ ಭವಾನಿ ಮಾತಾ ಮಂದಿರದಲ್ಲಿ, ಅ.11 ಕ್ಕೆ ಸಂಜೆ 6 ಗಂಟೆಯಿಂದ ನಗರದ ದೇವಿ ಕಾಲೋನಿಯಲ್ಲಿರುವ ಭವಾನಿ ದೇವಾಲಯದಲ್ಲಿ ಮಾತಾ ಕಾ ದರ್ಬಾರ ಕಾರ್ಯಕ್ರಮ ಜರುಗಲಿದೆ ಎಂದು ಮಹೇಶಕುಮಾರ ಕುಂಬಾರ ತಿಳಿಸಿದರು.

ಗುದಗೆ ಆಸ್ಪತ್ರೆಯ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಸೋಲಪುರ ಮಾತನಾಡಿ, ದಸರಾ ದರ್ಬಾರ ಮೂಲಕ ಎಲ್ಲೆಡೆ ದಾಂಡಿಯಾ ನೃತ್ಯ, ಗರ್ಭಾ ನೃತ್ಯ, ಭಜನೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಾಗಿ ಭಾಗವಹಿಬೇಕು. ಮಹೇಶಕುಮಾರ ಕುಂಬಾರ ಹಾಗೂ ತಂಡದವರು ಪ್ರತಿ ವರ್ಷ ಇಂತಹ ದಸರಾ ದರ್ಬಾರ ಕಾರ್ಯಕ್ರಮ ಆಯೋಜಿಸಿ ಯುವಜನರನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಈ ಸಂದರ್ಭದಲ್ಲಿ ಕಲಾವಿದ ಆಕ್ಷಯ, ಯೋಗ ಶಿಕ್ಷಕ ಗೋರಖನಾಥ ಕುಂಬಾರ ಇದ್ದರು.