ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಡೇ ಕೇರ್‌ನಲ್ಲಿ ಪುಟ್ಟಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದ ಆರೋಪ ಹೊತ್ತಿರುವ ಮಹಿಳಾ ಸಿಬ್ಬಂದಿಯೊಬ್ಬಳನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್ಎಎಲ್ ಸಮೀಪ ನಿವಾಸಿ ವಿಜಯಲಕ್ಷ್ಮೀ ಬಂಧಿತಳಾಗಿದ್ದು, ಈ ಕೃತ್ಯ ಬೆಳಕಿಗೆ ಬಂದ ನಂತರ ಆಕೆ ತಲೆಮರೆಸಿಕೊಂಡಿದ್ದಳು. ಇನ್ನು ತಪ್ಪಿಸಿಕೊಂಡಿರುವ ಉಳಿದವರ ಪತ್ತೆಗೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.ಕೋಲಾರ ಜಿಲ್ಲೆ ವಿಜಯಲಕ್ಷ್ಮೀ, ಕೆಲ ದಿನಗಳ ಹಿಂದೆ ಡೇ ಕೇರ್‌ನಲ್ಲಿ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದಳು. ಡೇ ಕೇರ್‌ನಲ್ಲಿ ಮಕ್ಕಳು ರಚ್ಚೆಹಿಡಿದರೆ ಆಕೆ ಹಲ್ಲೆ ನಡೆಸುತ್ತಿದ್ದಳು ಎಂದು ತಿಳಿದು ಬಂದಿದೆ.

ಎಚ್‌ಎಎಲ್ ಸಮೀಪದ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ನ ಡೇ ಕೇರ್‌ ಕೇಂದ್ರದಲ್ಲಿ ಪುಟ್ಟಮಕ್ಕಳ ಮೇಲೆ ದೌರ್ಜನ್ಯ ನಡೆದ ಆರೋಪ ಕೇಳಿ ಬಂದಿತ್ತು. ವಾಷಿಂಗ್ ಮಷಿನ್‌ ಒಳಗೆ ಹಾಕುವುದು ಹಾಗೂ ಶೌಚಾಲಯದ ಜೆಟ್ ಸ್ಪ್ರೇ ಪೈಪ್ ಅನ್ನು ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವುದು ಸೇರಿ ಹಿಂಸಿಸುವ ವಿಡಿಯೋಗಳು ಬಹಿರಂಗವಾಗಿದ್ದವು. ಈ ಡೇರ್ ಕೇರ್ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈ ಕಿರುಕುಳ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.ವರದಿ ಬಂದ ನಂತರ

ಕ್ರಮ: ಪ್ರಿಯಾಂಕ್‌ ಖರ್ಗೆ


ಖಾಸಗಿ ಕಂಪನಿಯ ಡೇ ಕೇರ್‌ ಕೇಂದ್ರದಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯ ಘಟನೆ ಸಂಬಂಧ ಪೊಲೀಸರು ವರದಿ ಕೇಳಿದ್ದು, ವರದಿ ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು,ಡೇ ಕೇರ್‌ ಕೇಂದ್ರ, ನರ್ಸರಿ ಶಾಲೆ ಇರಬಹುದು, ಹೇಗೆ ನಡೆಸಬೇಕು ಎಂಬ ಬಗ್ಗೆ ಪ್ರತಿಯೊಂದು ಕಂಪನಿ ತನ್ನದೇ ಆದ ಮಾರ್ಗಸೂಚಿ ಹೊಂದಿರುತ್ತದೆ. ಜತೆಗೆ ಸರ್ಕಾರದ ಮಾರ್ಗಸೂಚಿ ಸಹ ಇರುತ್ತದೆ. ಕಂಪನಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಬೆಂಗಳೂರಿನಲ್ಲಿ ನಡೆದ ಪ್ರಕರಣ ತಲೆ ತಗ್ಗಿಸುವಂತಹ ವಿಷಯವಾಗಿದೆ. ಈ ವಿಷಯದಲ್ಲಿ ನಾವೂ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಪ್ರಕರಣವನ್ನು ನೋಡಿದಾಗ ಸರಿಯಾಗಿ ಮಾರ್ಗಸೂಚಿ ಪಾಲನೆಯಾಗಿಲ್ಲ ಎಂದು ಗೊತ್ತಾಗಿದೆ. ಸದ್ಯ ಪೊಲೀಸರು ಕಂಪನಿಗೆ ವರದಿ ನೀಡುವಂತೆ ಕೇಳಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.