ಸಾರಾಂಶ
ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ, ಶಾಲೆ ಅತ್ಯಂತ ಚಿಕ್ಕದಾಗಿದೆ. ಅಡುಗೆ ಮನೆ, ಆಟದ ಮೈದಾನ, ದಾಸ್ತಾನು ಕೊಠಡಿ, ಪ್ರಾರ್ಥನೆ ಮಾಡಲು ಸಹ ಸೂಕ್ತ ಸ್ಥಳಾವಕಾಶ ಇಲ್ಲ. ಸಮಸ್ಯೆ ಸರಿ ಪಡಿಸಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬಾಣಸಮುದ್ರ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮದ ಮೂರು ಅಂಗನವಾಡಿ ಕೇಂದ್ರಗಳಿಗೂ ಭೇಟಿ ನೀಡಿದಾಗಿ ಸರ್ಕಾರಿ ಭೂಮಿ ಮಂಜೂರಾಗದೇ ಖಾಸಗಿ ಮನೆಗಳಲ್ಲಿ ಬಾಡಿಗೆ ಆಧಾರದ ಮೇಲೆ ಅಂಗನವಾಡಿ ನಡೆಸಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಒತ್ತುವರಿಯಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸಿ ಬಣಸವಾಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು, ಪಶು ಆಸ್ಪತ್ರೆ ತೆರೆಯಲು ಸ್ಥಳ ನಿಗದಿಪಡಿಸುಕೊಡುವಂತೆ ತಹಸೀಲ್ದಾರ್ಗೆ ಸೂಚಿಸಿದರು.ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ, ಶಾಲೆ ಅತ್ಯಂತ ಚಿಕ್ಕದಾಗಿದೆ. ಅಡುಗೆ ಮನೆ, ಆಟದ ಮೈದಾನ, ದಾಸ್ತಾನು ಕೊಠಡಿ, ಪ್ರಾರ್ಥನೆ ಮಾಡಲು ಸಹ ಸೂಕ್ತ ಸ್ಥಳಾವಕಾಶ ಇಲ್ಲ. ಸಮಸ್ಯೆ ಸರಿ ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪರಿಶೀಲನೆ ವೇಳೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸಿಲ್ಲ. ಇದಕ್ಕೆ ಕಾರಣ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು. ತಾಲೂಕಿನಲ್ಲೇ 2ನೇ ಅತಿ ದೊಡ್ಡ ಗ್ರಾಮ ಬಾಣಸಮುದ್ರ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ, ಗ್ರಾಮವು ಪಕ್ಕದ ಕದಂಪುರ, ಕೊಲ್ಲಾಪುರಕ್ಕೆ ಹೊಂದಿಕೊಂಡಿದೆ. ನೂರಾರು ಮಕ್ಕಳು ಪಟ್ಟಣಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಸ್ಸಿನ ಸೌಕರ್ಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಸರ್ಕಾರಿ ಬಸ್ ಕಲ್ಪಿಸುವಂತೆ ತಿಳಿಸಿದರು.ಬಾಣಸಮುದ್ರ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತವಾಗಿದೆ. ಇಲ್ಲಿ ಕಚೇರಿ ತೆರೆಯುವಂತೆ ಗ್ರಾಮಸ್ಥರು ಡೀಸಿ ಬಳಿ ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.