ಸಾರಾಂಶ
ಸಿಡಿಲಿಗೆ ಬಲಿಯಾದ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಕುರಿಗಾಹಿ ಗೋವಿಂದಪ್ಪನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ವಿಭೂತಿಹಳ್ಳಿಯಲ್ಲಿ ಸಿಡಿಲಿಗೆ ಬಲಿಯಾದ ಕುರಿಗಾಹಿ ಗೋವಿಂದಪ್ಪನ ಮನೆಗೆ ಮಂಗಳವಾರ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಪ್ರಕೃತಿ ವಿಕೋಪದಡಿ ಬಲಿಯಾದ ಗೋವಿಂದಪ್ಪನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಪರಿಹಾರ ಧನ 5 ಲಕ್ಷ ರು. ವಿತರಿಸಲು ಸೂಚಿಸಿದ್ದೇನೆ. ಅಲ್ಲದೆ ಸಿಡಿಲಿಗೆ ಬಲಿಯಾದ ಪ್ರತಿ ಕುರಿಗಳಿಗೆ 4 ಸಾವಿರ ರು. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರೊಂದಿಗೆ ಮಾತನಾಡಿದ ಸಚಿವ ದರ್ಶನಾಪುರ, ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದು, ಪರಿಹಾರವನ್ನು ಆದಷ್ಟು ಬೇಗ ಕೊಡಿಸಲಾಗುವುದು ಎಂದರಲ್ಲದೆ, ವೈಯಕ್ತಿಕವಾಗಿ 50 ಸಾವಿರ ರು.ಗಳ ಧನ ಸಹಾಯವನ್ನು ಮೃತ ಕುರಿಗಾಹಿಯ ಪತ್ನಿಗೆ ನೀಡಿದರು.