ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ರಾಜ್ಯ ಉಪಾಧ್ಯಕ್ಷ ಮಹೇಶ್ ಅವರಿಂದ ಚೆಕ್ ವಿತರಣೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಸಂಕ್ರಾಂತಿ ಹಬ್ಬದಂದು ಅಪಘಾತದಲ್ಲಿ ಮೃತಪಟ್ಟಿದ್ದ ನಾಲ್ಕು ಮಂದಿಯ ಕುಟುಂಬಕ್ಕೆ ಭಾರತೀಯ ಜನತಾಪಕ್ಷ 1ಲಕ್ಷ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದೆ. ಜಿನಕನಹಳ್ಳಿ ಬಳಿ ಭತ್ತ ಕಟಾವು ಮಾಡುವ ಯಂತ್ರ ಹಾಗೂ ಬೈಕ್ ನಡುವೆ ಅಪಘಾತವಾಗಿ ಒಂದೇ ಕುಟುಂಬದ ಸಂತೋಷ್ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆ ತಾಲೂಕಿನ ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಜನಧ್ವನಿ ವೆಂಕಟೇಶ್ ಹಾಗೂ ಮಾಜಿ ಶಾಸಕ ಎಸ್. ಬಾಲರಾಜು ರವರ ನಿಯೋಗ, ಮಗ, ಸೊಸೆ ಹಾಗೂ ಮೊಮ್ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿರುವ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಪಕ್ಷದ ವತಿಯಿಂದ ಒಂದು ಲಕ್ಷ ರು. ಗಳ ಧನ ಸಹಾಯ ಮಾಡುವುದರ ಮೂಲಕ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ತಮಿಳುನಾಡಿನಿಂದ ಬರುವ ಇಂತಹ ವಾಹನಗಳು ನಿಯಮ ಪಾಲಿಸದೆ ತಮ್ಮ ಸಂಪಾದನೆಗೋಸ್ಕರ ರಸ್ತೆ ತುಂಬ ಬೇಕಾಬಿಟ್ಟಿ ಸಂಚರಿಸುತ್ತಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಜಿಲ್ಲಾಡಳಿತ ಹಾಗೂ ಆರ್.ಟಿ.ಓ ಅಧಿಕಾರಿಗಳು ಹೊರರಾಜ್ಯದಿಂದ ಬರುವ ಇಂತಹ ವಾಹನಗಳಿಗೆ ಕಡಿವಾಣ ಹಾಕಬೇಕು, ಅಪಘಾತದಲ್ಲಿ ಇಡೀ ಕುಟುಂಬವನ್ನೆ ಕಳೆದುಕೊಂಡು ಅನಾಥರಾಗಿರುವ ಮೃತರ ಪೋಷಕರಿಗೆ ಸರ್ಕಾರ ನೆರವು ನೀಡಬೇಕು ಎಂದರು.