ಕನ್ನಡಪ್ರಭ ವಾರ್ತೆ, ತುಮಕೂರು ಯುವ ಉತ್ಸಾಹಿ ಪಶುವೈದ್ಯೆ ಡಾ.ಸುಮೀಕ್ಷಾ ರೆಡ್ಡಿ ಅವರು ಸಾವು, ಪಶುವೈದ್ಯರಿಗೆ ಒಂದು ಪಾಠವಾಗಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ಇನ್ನೂ ಮುಂದಾದರೂ ವೈದ್ಯರ ರಕ್ಷಣೆಗೆ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಎಚ್.ಎಂ.ಶಿವಪ್ರಸಾದ್ ಒತ್ತಾಯಿಸಿದ್ದಾರೆ.ನಗರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತರಬೇತಿ ಸಭಾಂಗಣದಲ್ಲಿ ಶಿವಮೊಗ್ಗದ ತಾವರೆಕೊಪ್ಪದ ಲಯನ್ ಸಫಾರಿ ವನ್ಯಧಾಮದಲ್ಲಿ ಚಿಕಿತ್ಸೆ ನೀಡುವ ವೇಳೆ ನೀರಾನೆ ದಾಳಿಗೆ ತುತ್ತಾಗಿ ಸಾವಿಗೀಡಾದ ತರಬೇತಿ ವೈದ್ಯೆ ಡಾ.ಸುಮೀಕ್ಷಾ ರೆಡ್ಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ರಾತ್ರಿಯ ವೇಳೆ ವನ್ಯ ಜೀವ ಚಿಕಿತ್ಸೆಗೆ ನಿಯಮದಲ್ಲಿ ಅವಕಾಶವೇ ಇಲ್ಲ. ಒಂದು ವೇಳೆ ತುರ್ತು ಅಗತ್ಯ ಕಂಡುಬಂದರೆ ಹಿರಿಯ ಆರ್.ಎಫ್.ಒ ಮತ್ತು ನುರಿತ ಡಾಕ್ಟರ್‌ಗಳ ಸಮ್ಮುಖದಲ್ಲಿ ಎಲ್ಲಾ ಅಗತ್ಯ ಮುಜಾಂಗ್ರತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ಮಾಡಬೇಕಾಗುತ್ತದೆ.ಆದರೆ ಟ್ರೈನಿ ಪಶು ವೈದ್ಯರನ್ನು ಚಿಕಿತ್ಸೆಗೆ ಕಳುಹಿಸಿದವರು ಯಾರು? ಈ ವೇಳೆ ಎಸ್.ಒ.ಪಿ ಅನುಸರಿಸಿಲ್ಲವೇ ಎಂಬ ಇತ್ಯಾದಿ ಪ್ರಶ್ನೆಗಳು ಉದ್ಬವಿಸುತ್ತೇವೆ.ಈ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಳ್ಳಲು ಸಿಸಿಟಿವಿ ಪೂಟೇಜ್ ಸಹ ಲಭ್ಯವಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು.

ನ್ಯಾಯಯುತ ತನಿಖೆ ನಡೆಯುವುದೇ ಅನುಮಾನ ಎಂದು ಹಲವರು ಮಾತನಾಡುತ್ತಿದ್ದಾರೆ. ಸರ್ಕಾರ ಇನ್ನೂ ಮುಂದಾದರೂ ಅಗತ್ಯ ಕ್ರಮ ಕೈಗೊಂಡು, ಪಶುವೈದ್ಯರ ಜೀವ ಉಳಿಸಲು ಮುಂದಾಗಲಿ. ಬನಮ್ಮಲ್ಲಿಯೂ ಕೆಲವೊಮ್ಮೆ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬಂದಾಗ, ಜಾತ್ರೆ, ಉತ್ಸವಗಳಲ್ಲಿ ಆನೆಗಳ ಬಳಕೆ ಮಾಡುವ ಸಂದರ್ಭದಲ್ಲಿ ಪಶುವೈದ್ಯರನ್ನು ಕಳುಹಿಸಿಕೊಡಲು ಬೇಡಿಕೆ ಬರುತ್ತದೆ. ಆದರೆ ನಮ್ಮಲ್ಲಿ ವನ್ಯಜೀವಿ ತರಬೇತಿ ಪಡೆದ ವೈದ್ಯರಿಲ್ಲದ ಕಾರಣ, ಮನವಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಡಾ.ಎಚ್.ಎಂ.ಶಿವಪ್ರಸಾದ್ ನುಡಿದರು.ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರುದ್ರಪ್ರಸಾದ್, ಯುವ ಉತ್ಸಾಹಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವು ನಿಜಕ್ಕೂ ದುಖಃದ ವಿಚಾರ.ವನ್ಯಜೀವಿಗಳ ಸೇವೆಯನ್ನು ಫ್ಯಾಷನ್ ಎಂಬಂತೆ ತೆಗೆದುಕೊಂಡು ತರಬೇತಿಗಾಗಿ ಶಿವಮೊಗ್ಗ ಜಿಲ್ಲೆಯ ತಾವರೆಕೆರೆ ವನ್ಯಜೀವಿ ಧಾಮಕ್ಕೆ ಕಳೆದ ಒಂದುವರೆಗೆ ತಿಂಗಳ ಹಿಂದೆ ಬಂದಿದ್ದ ಇವರ ಸಾವು ಪಶು ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರಿಗೆ ನಿಜಕ್ಕೂ ಆಘಾತವನ್ನು ಉಂಟು ಮಾಡಿದೆ. ತಂದೆ, ತಾಯಿಗೆ ಒಬ್ಬಳೇ ಮಗಳಾಗಿ, ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ವನ್ಯಜೀವಿಗಳ ಸೇವೆಗೆ ತನ್ನ ಬದುಕನ್ನು ಮೀಸಲಿಡಬೇಕು ಎಂದುಕೊಂಡಿದ್ದ ಯುವ ಪ್ರತಿಭೆಯ ಸಾವು ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದರು.ಅರಣ್ಯ ಇಲಾಖೆಗಾಗಲಿ,ಪ್ರಾಣಿ ಸಂಗ್ರಹಾಲಯಗಳಿಗೆ ತನ್ನದೇ ಆದ ಸ್ವಂತ ಸಿಬ್ಬಂದಿ ಇಲ್ಲ.ಪಶು ವೈದ್ಯಕೀಯ ಇಲಾಖೆಯಿಂದಲೇ ಎರವಲು ಪಡೆಯುತ್ತಾರೆ. ವನ್ಯಜೀವಿಗಳ ಸೇವೆಗೆ ಹೋಗಲು ಹಿಂದು ಮುಂದು ನೋಡುವ ಈ ಕಾಲದಲ್ಲಿ ಡಾ.ಸಮೀಕ್ಷಾ ರೆಡ್ಡಿ ಕಾಡು ಪ್ರಾಣಿಗಳ ಸೇವೆಗೆ ಮುಂದಾಗಿದ್ದರು.ಆವರ ರಕ್ಷಣೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು ಅವರ ಸಾವಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ನುಡಿದರು.ಪಶುವೈದ್ಯೆ ಡಾ.ಜಯಂತಿ ಮಾತನಾಡಿ,ಯುವ ಉತ್ಸಾಹಿ ಪಶುವೈದ್ಯೆಯೊಬ್ಬರ ಜೀವ,ಅವರ ಅತಿ ಉತ್ಸಾಹಕ್ಕೆ ಬಲಿಯಾಗಿದೆ. ಎಸ್.ಒ.ಪಿ ಇಲ್ಲದೆ ವನ್ಯ ಜೀವಿಗಳ ಚಿಕಿತ್ಸೆ ಅಸಾಧ್ಯ. ಎಷ್ಟೋ ಸಂದರ್ಭಗಳಲ್ಲಿ ಸಾಕು ಪ್ರಾಣಿಗಳೇ ನಿರೀಕ್ಷೆಗೂ ವ್ಯತಿರಕ್ತವಾಗಿ ವರ್ತಿಸಿರುವ ಉದಾಹರಣೆಗಳಿವೆ. ಹಾಗಾಗಿ ವೈದ್ಯರು ಪ್ರಾಣಿಗಳ ಚಿಕಿತ್ಸೆಗೆ ಮುಂದಾಗುವ ವೇಳೆ ಎಷ್ಟೋ ಅನುಭವ ಇದ್ದರೂ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಮೈ ಎಲ್ಲಾ ಕಣ್ಣಾಗಿರಬೇಕು. ಅನ್ಯಮನಸ್ಕರಾಗಿ ಪ್ರಾಣಿಗಳ ಚಿಕಿತ್ಸೆಯಲ್ಲಿ ತೊಡಗಬಾರದು. ಇನ್ನೂ ಮುಂದಾದರೂ ಸರಕಾರ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕೆಂದರು.ಕಾರ್ಯಕ್ರಮವನ್ನು ಡಾ.ಶ್ರೀನಿವಾಸ್ ಕುಜ ನಿರೂಪಿಸಿದರು.ವೇದಿಕೆಯಲ್ಲಿ ಪಶುವೈದ್ಯಕೀಯ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ದಿವಾಕರ್, ಡಾ.ಮಂಜುನಾಥ್ ಹಾಗೂ ಪಶುವೈದ್ಯರು ಉಪಸ್ಥಿತರಿದ್ದರು.