ಸಾರಾಂಶ
ಬೆಳಗಾವಿ : ಲೀಸ್ ಮುಗಿದ ಪಾಲಿಕೆ ಆಸ್ತಿಗಳಿಂದ ಪಾಲಿಕೆಗೆ ಎಷ್ಟು ತೆರಿಗೆ ಹಣ ಬರಬೇಕಿದೆ ಎಂಬುದರ ಕುರಿತು ತನಿಖೆ ನಡೆಸಲು ಬೆಳಗಾವಿ ಮಹಾನಗರ ಪಾಲಿಕೆ ತೀರ್ಮಾನಿಸಿದೆ.
ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಮಂಗಳವಾರ ಪಾಲಿಕೆ ಸಭಾಭವನದಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಗೋವಾವೇಸ್ ಪೆಟ್ರೋಲ್ ಪಂಪ್, ಅರ್ಬನ್ ಬ್ಯಾಂಕ್ ಸೇರಿದಂತೆ ಲೀಸ್ ಮುಗಿದ ಆಸ್ತಿಗಳಿಂದ ಎಷ್ಟು ತೆರಿಗೆ ಕಟ್ಟಬೇಕಿದೆ ಎಂಬುದರ ಕುರಿತು ತನಿಖೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
ನಾಮನಿರ್ದೇಶಿತ ಸದಸ್ಯ ರಮೇಶ ಸೋಂಟಕ್ಕಿ ಮಾತನಾಡಿ, ಗೋವಾವೇಸ್ ನಲ್ಲಿರುವ ಪೆಟ್ರೋಲ್ ಪಂಪ್ ನವರು ಮಹಾನಗರ ಪಾಲಿಕೆಗೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಇಲ್ಲಿ ಪಾಲಿಕೆಯಿಂದ ಮಳಿಗೆ ನಿರ್ಮಾಣ ಮಾಡಿ ಪಾಲಿಕೆಯ ಸಂಪನ್ಮೂಲ ಹೆಚ್ಚಿಸಲು ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದರು.
ಗೋವಾವೇಸ್ ನ ಅರ್ಬನ್ ಬ್ಯಾಂಕ್ ನವರು ಸಹ ಕೋಟ್ಯಂತರ ರುಪಾಯಿ ಪಾಲಿಕೆಗೆ ಕಟ್ಟಬೇಕಿದೆ. ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ. ಇವರ ಮೇಲೆ ಕ್ರಮ ಕೈಗೊಂಡರೆ ಪಾಲಿಕೆ ಆದಾಯ ವೃದ್ಧಿಯಾಗುತ್ತದೆ ಎಂದರು.
ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಮಾತನಾಡಿ, ಗೋವಾವೇಸ್ ನಲ್ಲಿರುವ ಪೆಟ್ರೋಲ್ ಪಂಪ್ ಹಾಗೂ ಅರ್ಬನ್ ಬ್ಯಾಂಕ್ ಎಷ್ಟು ಹಣ ಪಾಲಿಕೆಗೆ ಕೊಡಬೇಕು ಹಾಗೂ ಹೊಸ ಟೆಂಡರ್ ಕರೆದು ಬೇರೆಯವರಿಗೆ ಕೊಡಿ ಎಂದು ಸಲಹೆ ನೀಡಿದರು.ಬೆಳಗಾವಿ ಮಹಾನಗರಪಾಲಿಕೆಯ ಮರಾಠಿ ಕಡತದಲ್ಲಿ ರಾಷ್ಟ್ರಪತಿಗಳ ಹೆಸರನ್ನು ತಪ್ಪಾಗಿ ಮುದ್ರಿಸಿರುವುದು ಖಂಡನೀಯ ಎಂದು ಎಂಇಎಸ್ ಸದಸ್ಯ ರವಿ ಸಾಳುಂಕೆ ಆರೋಪಿಸಿದರು.
ಪಾಲಿಕೆ ಆಯುಕ್ತೆ ಶುಭ ಮಾತನಾಡಿ, ಮೊದಲು ನಾವು ಸ್ಥಳ ಪರಿಶೀಲನೆ ಮಾಡಬೇಕು. ಹಳೆಯ ಮಾಲೀಕರು ಪಾಲಿಕೆಗೆ ಎಷ್ಟು ಕೊಡಬೇಕು ಎಂದು ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.ಉಪಮೇಯರ್ ಆನಂದ ಚೌಹಾಣ, ಶಾಸಕ ಆಸೀಫ್ ಸೇಠ್, ಆಡಳಿತ ಪಕ್ಷದ ನಾಯಕ ಗಿರೀಶ ದೋಂಗಡಿ, ವಿಪಕ್ಷ ನಾಯಕ ಮುಜಮ್ಮಿಲ್ ಡೋಣಿ, ಪಾಲಿಕೆ ಅಧಿಕಾರಿಗಳಾದ ರೇಷ್ಮಾ ತಾಳಿಕೋಟಿ, ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಇತರರು ಇದ್ದರು.